
ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತವು ಪಾಕಿಸ್ತಾನ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಪಾಕಿಸ್ತಾನದಿಂದ (Pakistan) ಬರುವ ಸರಕುಗಳ ಆಮದು ನಿಲ್ಲಿಸುವುದು ಹಾಗೂ ಪಾಕಿಸ್ತಾನಿ ಹಡಗುಗಳಿಗೆ ಭಾರತೀಯ ಬಂದರುಗಳಲ್ಲಿ ನಿಲುಗಡೆಗೆ ನಿಷೇಧ ಹೇರಲಾಗಿದೆ.
ಈ ಕ್ರಮಕ್ಕೆ ಪ್ರತಿಯಾಗಿ, ಪಾಕಿಸ್ತಾನವೂ ಶನಿವಾರದಿಂದಲೇ ಭಾರತೀಯ ಹಡಗುಗಳಿಗೆ ತನ್ನ ಬಂದರುಗಳಿಗೆ ಪ್ರವೇಶ ನಿರಾಕರಿಸಿದೆ. ಪಾಕಿಸ್ತಾನದ ಕಡಲ ವ್ಯವಹಾರಗಳ ಇಲಾಖೆ ಈ ಬಗ್ಗೆ ಅಧಿಸೂಚನೆ ಹೊರಡಿಸಿ, ದೇಶದ ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ತಕ್ಷಣದ ಪರಿಣಾಮವಾಗಿ ಈ ನಿರ್ಧಾರ ಕೈಗೊಂಡಿದೆ.
ಪಹಲ್ಗಾಮ್ ದಾಳಿಯ ನಂತರ ಭಾರತವು ಈ ಕೆಳಗಿನ ಪ್ರಮುಖ ನಿರ್ಬಂಧಗಳನ್ನು ಪಾಕಿಸ್ತಾನ ವಿರುದ್ಧ ಹೇರಿದೆ.
- ಸಿಂಧೂ ನದಿಯ ಜಲ ಒಪ್ಪಂದ ಸ್ಥಗಿತ
- ವಾಘಾ-ಅಟ್ಟಾರಿ ಗಡಿ ಮುಚ್ಚಲಾಗಿದೆ
- ರಾಜತಾಂತ್ರಿಕ ಸಂಪರ್ಕ ಕಡಿತಗೊಂಡಿವೆ
- ಪಾಕಿಸ್ತಾನಿ ಸರಕುಗಳ ಆಮದು ನಿಷೇಧ
- ಭಾರತದಲ್ಲಿರುವ ಪಾಕಿಸ್ತಾನಿ ನಾಗರಿಕರನ್ನು ಗಡಿಪಾರು ಮಾಡಲಾಗುತ್ತಿದೆ
- ಪಾಕಿಸ್ತಾನಿ ನಾಗರಿಕರಿಗೆ ನೀಡಿದ್ದ ವೀಸಾಗಳು ರದ್ದುಗೊಳಿಸಲಾಗಿದೆ.
ಇದೇ ವೇಳೆ, 2019ರ ಪುಲ್ವಾಮಾ ದಾಳಿಯ ನಂತರವೂ ಭಾರತವು ಪಾಕಿಸ್ತಾನದ ಆಮದು ಸರಕುಗಳಿಗೆ 200% ಸುಂಕ ವಿಧಿಸಿದ್ದುದನ್ನು ನೆನಪಿಸಿಕೊಳ್ಳಬಹುದು. ಈಗಲೂ ಭಾರತವು ಹೊಸ ನಿರ್ಬಂಧಗಳನ್ನು ಜಾರಿಗೆ ತಂದಿದ್ದು, ಇವು ಪಾಕಿಸ್ತಾನಕ್ಕೆ ಆರ್ಥಿಕವಾಗಿ ಭಾರೀ ಹೊಡೆತ ನೀಡುವ ನಿರೀಕ್ಷೆಯಿದೆ.