
Belagavi: ಬೆಳಗಾವಿ ಮತ್ತು ಧಾರವಾಡ (Belagavi-Dharwad) ನೇರ ರೈಲು ಮಾರ್ಗದ ಯೋಜನೆಗೆ ಚುರುಕು ಬಂದಿದೆ. ಈ ಮಾರ್ಗಕ್ಕೆ ಅಗತ್ಯವಿದ್ದ 600 ಎಕರೆ ಭೂಮಿ ಈಗಾಗಲೇ ಸ್ವಾಧೀನವಾಗಿದ್ದು, ರೈಲ್ವೆ ಇಲಾಖೆ ಮುಂದಿನ ಒಂದು ತಿಂಗಳಲ್ಲಿ ಟೆಂಡರ್ ಕರೆಯಲಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
ಈ ಯೋಜನೆ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದ್ದು, ಕಳೆದ ಐದು ವರ್ಷಗಳಿಂದ ಸ್ಥಗಿತಗೊಂಡಿತ್ತು. ಈಗ ಬೆಳಗಾವಿ ಜಿಲ್ಲೆಯ ಭೂಸ್ವಾಧೀನ ಪ್ರಕ್ರಿಯೆ ಮುಕ್ತಾಯವಾಗಿದೆ.
ಇದುವರೆಗೆ ರೈಲು ಲೋಂಡಾ ಮಾರ್ಗವಾಗಿ ಸಾಗುತ್ತಿತ್ತು. ಹೊಸ ನೇರ ಮಾರ್ಗದಿಂದ ರೈಲು ಕಿತ್ತೂರು ಮೂಲಕ ಸಾಗಲಿದೆ. ಬೆಳಗಾವಿಯಿಂದ ಧಾರವಾಡಕ್ಕೆ ಹೋಗಲು ಮೂರು ಗಂಟೆಯ ಬದಲು ಕೇವಲ ಒಂದೂವರೆ ಗಂಟೆ ಸಾಕಾಗುತ್ತದೆ. ಈ ಯೋಜನೆಯಿಂದ ಬೆಳಗಾವಿ, ಧಾರವಾಡ ಹಾಗೂ ಹುಬ್ಬಳ್ಳಿಯ ತ್ರಿವಳಿ ನಗರಗಳ ಅಭಿವೃದ್ಧಿಗೆ ಸಹಾಯವಾಗಲಿದೆ.
ಈ ಯೋಜನೆಗೆ 2020ರಲ್ಲಿ ಸುರೇಶ ಅಂಗಡಿ ಸಚಿವರಾಗಿದ್ದಾಗ ಅನುಮೋದನೆ ಸಿಕ್ಕಿದ್ದು, ಕೇಂದ್ರ ಸರ್ಕಾರ 900 ಕೋಟಿ ರೂ. ಮೀಸಲಿಟ್ಟಿತ್ತು. ಆದರೆ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾದ ಕಾರಣ ಯೋಜನೆ ಮುಂದಕ್ಕೆ ಹೋಗಿರಲಿಲ್ಲ.
ಸದ್ಯ ಸಂಸದ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಯೋಜನೆಗೆ ಪುನಚೆತನ ದೊರೆತಿದ್ದು, ಮೊದಲ ಹಂತದಲ್ಲಿ 600 ಎಕರೆ ಭೂಸ್ವಾಧೀನ ಪೂರ್ಣಗೊಂಡಿದೆ. ಎರಡನೇ ಹಂತದಲ್ಲಿ ಇನ್ನೂ 600 ಎಕರೆ ಭೂಮಿ ಸ್ವಾಧೀನಗೊಳ್ಳಬೇಕಿದೆ.
ರೈಲ್ವೆ ಇಲಾಖೆ ಒಂದು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲಿದೆ. ಈಗಾಗಲೇ 700 ಎಕರೆ ಭೂಮಿಗೆ ಸರ್ಕಾರ ಅನುಮೋದನೆ ನೀಡಿದೆ. ಉಳಿದ ಭೂಮಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಯೋಜನೆಯಡಿ ಬೆಳಗಾವಿ, ದೇಸೂರ, ಎಂ.ಕೆ. ಹುಬ್ಬಳ್ಳಿ, ಕಿತ್ತೂರು, ತೇಗೂರು ಮೂಲಕ ಧಾರವಾಡವನ್ನು ಸಂಪರ್ಕಿಸುವ 75 ಕಿ.ಮೀ ಉದ್ದದ ರೈಲು ಮಾರ್ಗವನ್ನು ನಿರ್ಮಿಸಲಾಗುತ್ತದೆ. ಈ ಕಾಮಗಾರಿ ಎರಡು ವರ್ಷಗಳಲ್ಲಿ ಮುಗಿಯುವ ನಿರೀಕ್ಷೆಯಿದೆ.