
ಮೇ 23 ರಂದು ದೆಹಲಿಯಲ್ಲಿ 23 ಕೊವಿಡ್-19 ಪ್ರಕರಣಗಳು (Covid cases) ದೃಢಪಟ್ಟಿವೆ. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರವು ಆಸ್ಪತ್ರೆಗಳಿಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿರಲು ಸೂಚನೆ ನೀಡಿದೆ. ಗುರುಗ್ರಾಮ್ ಮತ್ತು ಫರಿದಾಬಾದ್ನಲ್ಲಿ ಶಂಕಿತ ಪ್ರಕರಣಗಳು ಪತ್ತೆಯಾದ ನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಆರೋಗ್ಯ ಇಲಾಖೆ ನಿರ್ದೇಶನದಂತೆ ಆಸ್ಪತ್ರೆಗಳು ಹಾಸಿಗೆಗಳು, ಆಮ್ಲಜನಕ (ಆಕ್ಸಿಜನ್), ಲಸಿಕೆಗಳು ಮತ್ತು ಔಷಧಿಗಳ ಲಭ್ಯತೆ ಖಚಿತಪಡಿಸಿಕೊಳ್ಳಬೇಕು. ವೆಂಟಿಲೇಟರ್, ಬೈ-ಪಿಎಪಿ ಯಂತ್ರಗಳು, ಆಮ್ಲಜನಕ ಸಾಂದ್ರಕಗಳು ಹಾಗೂ ಪಿಎಸ್ಎ ಪ್ಲ್ಯಾಂಟ್ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಪರೀಕ್ಷಿಸಬೇಕು.
ದೆಹಲಿ ಆರೋಗ್ಯ ಸಚಿವ ಪಂಕಜ್ ಕುಮಾರ್ ಸಿಂಗ್ ಅವರು, ಮೇ 22 ರ ವೇಳೆಗೆ 23 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿಸಿದ್ದಾರೆ. ಈ ರೋಗಿಗಳು ಸ್ಥಳೀಯರೇ ಅಥವಾ ಹೊರ ರಾಜ್ಯದಿಂದ ಬಂದವರೇ ಎಂಬುದರ ಪರಿಶೀಲನೆ ನಡೆಯುತ್ತಿದೆ ಎಂದು ಹೇಳಿದರು.
ಮೇ 19ರ ವೇಳೆಗೆ ದೇಶದಾದ್ಯಂತ 257 ಸಕ್ರಿಯ ಕೊವಿಡ್ ಪ್ರಕರಣಗಳು ಇದ್ದವು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ದೇಶದಲ್ಲಿ ಕೊವಿಡ್ ಪ್ರಕರಣಗಳು ಮರು ಏರಿಕೆಯಾಗುತ್ತಿರುವುದರಿಂದ, ದೆಹಲಿ ಸೇರಿದಂತೆ ಹಲವು ರಾಜ್ಯಗಳು ಎಚ್ಚರಿಕೆ ಕ್ರಮ ತೆಗೆದುಕೊಳ್ಳುತ್ತಿವೆ. ಕೇರಳ, ಮಹಾರಾಷ್ಟ್ರ, ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚಾಗಿದ್ದು, ಬೆಂಗಳೂರಿನಲ್ಲಿ 9 ತಿಂಗಳ ಮಗುವಿಗೆ ಸೋಂಕು ತಗುಲಿರುವುದೂ ದೃಢಪಟ್ಟಿದೆ.