Ahmedabad (Gujarat): ಏರ್ ಇಂಡಿಯಾ ವಿಮಾನ ದುರಂತದಲ್ಲಿ ಪವಾಡಸದೃಶವಾಗಿ ಜೀವ ಉಳಿಸಿಕೊಂಡ 40 ವರ್ಷದ ಬ್ರಿಟಿಷ್ ಪ್ರಜೆ ರಮೇಶ್ ವಿಶ್ವಾಸ್ ಕುಮಾರ್ (Ramesh Vishwas Kumar) ಪ್ರಸ್ತುತ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಪಘಾತದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಅಪಘಾತ ನನ್ನ ಕಣ್ಣೆದುರೇ ನಡೆದಿತು. ನಾನು ಹೇಗೆ ಬದುಕಿ ಬಂದೆ ಎಂಬುದನ್ನು ನಾನೇ ನಂಬಲಾಗುತ್ತಿಲ್ಲ. ಆ ಕ್ಷಣಕ್ಕೆ ನಾನು ಸಾಯುತ್ತೇನೆ ಅನ್ನಿಸಿದ್ದೆ. ಕಣ್ಣು ತೆರೆದಾಗ ವಿಮಾನದ ಅವಶೇಷಗಳೊಳಗೆ ಸಿಕ್ಕಿಕೊಂಡಿದ್ದೆ. ಸುತ್ತಮುತ್ತೆ ಎಲ್ಲೆಡೆ ಮೃತದೇಹಗಳು ಬಿದ್ದಿದ್ದವು. ನಿಧಾನವಾಗಿ ಭಯದಿಂದ ಹೊರಬಂದೆ” ಎಂದರು.
ಅವರು ತಮ್ಮ ಅನುಭವ ಹಂಚಿಕೊಳ್ಳುತ್ತಾ, “ವಿಮಾನ ಟೇಕ್ ಆಫ್ ಆದ 10 ಸೆಕೆಂಡುಗಳಲ್ಲಿ ಏನು ನಡೆಯುತ್ತಿದೆ ಎಂಬುದೇ ಗೊತ್ತಾಗಲಿಲ್ಲ. ವಿಮಾನ ಗಾಳಿಯಲ್ಲಿ ನಿಂತಂತೆ ಅನುಭವವಾಯಿತು. ಒಳಗೆ ಹಸಿರು ಮತ್ತು ಬಿಳಿ ದೀಪಗಳು ಬೆಳಗಿದವು. ತಕ್ಷಣವೇ ಕಟ್ಟಡಕ್ಕೆ ಡಿಕ್ಕಿ ಹೊಡೆದಿತು. ನಾನು ಸೀಟ್ ಬೆಲ್ಟ್ ತೆಗೆದು ಹೇಗೋ ಹೊರಬಂದೆ. ಆದರೆ ಇತರರು ಹೊರಬರಲಿಲ್ಲ. ನಂತರ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋದರು. ಈಗ ವೈದ್ಯರು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ನನ್ನ ಸಹೋದರ ವಿಮಾನದಲ್ಲಿ ಇದ್ದ, ಆದರೆ ಅವರು ಸದ್ಯ ಕಾಣೆಯಾಗಿದ್ದಾರೆ” ಎಂದು ಭಾವುಕರಾದರು.
ಸೀಟ್ ನಂಬರ್ 11A ನಲ್ಲಿ ಕುಳಿತಿದ್ದ ರಮೇಶ್ ವಿಶ್ವಾಸ್ ಮುಂದೆ, ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಇದ್ದರು. ಈ ದುರಂತದಲ್ಲಿ ರೂಪಾನಿ ಸೇರಿದಂತೆ 241 ಮಂದಿ ಜೀವ ಕಳೆದುಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡ ರಮೇಶ್ ಮತ್ತು ಇತರರ ಆರೋಗ್ಯ ಸ್ಥಿತಿ ಕುರಿತು ಮಾಹಿತಿ ಪಡೆದರು.
ಈ ದುರಂತವು AI 171 ವಿಮಾನ ಲಂಡನ್ಗೆ ತೆರಳುತ್ತಿದ್ದ ವೇಳೆ, ಟೇಕ್ ಆಫ್ ಆದ ಕೆಲ ಸೆಕೆಂಡುಗಳಲ್ಲಿ ಸಂಭವಿಸಿದೆ. ರಮೇಶ್ ಹೊರತುಪಡಿಸಿ ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ.