ದಕ್ಷಿಣ ಆಫ್ರಿಕಾದ (South Africa) ಜೋಹಾನ್ಸ್ಬರ್ಗ್ನಲ್ಲಿ ಅತಿದೊಡ್ಡ ಹಿಂದೂ ದೇವಾಲಯ ಮತ್ತು ಸಾಂಸ್ಕೃತಿಕ ಸಂಕೀರ್ಣ ಭಾನುವಾರ ಉದ್ಘಾಟನೆಗೊಂಡಿದೆ. ಈ ಕಾರ್ಯಕ್ರಮದಲ್ಲಿ ನೂರಾರು ಹಿಂದೂ ಭಕ್ತರು ಭಾಗವಹಿಸಿದ್ದು, ಇದು ದಕ್ಷಿಣ ಆಫ್ರಿಕಾದ ಹಿಂದೂ ಸಮುದಾಯಕ್ಕೆ ಪ್ರಮುಖ ಮೈಲಿಗಲ್ಲಾಗಿದೆ.
ದಕ್ಷಿಣ ಆಫ್ರಿಕಾದ ಜನಸಂಖ್ಯೆಯಲ್ಲಿ ಹಿಂದೂಗಳು ಕೇವಲ ಎರಡು ಪ್ರತಿಶತ ಇದ್ದರೂ, ಭಾರತೀಯ ಸಮುದಾಯದಿಂದ ಈ ಧರ್ಮವು ಮಹತ್ವ ಪಡೆದುಕೊಂಡಿದೆ.
ಉದ್ಘಾಟನಾ ಸಮಾರಂಭದ ಅಂಗವಾಗಿ, ದೇವಾಲಯದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಭಾರತದಿಂದ ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (BAPS) ಪಂಗಡದ ಆಧ್ಯಾತ್ಮಿಕ ನಾಯಕ, 92 ವರ್ಷದ ಮಹಾಂತ ಸ್ವಾಮಿ ಮಹಾರಾಜ್ ಆಗಮಿಸಿದ್ದರು. ಅವರ ನೇತೃತ್ವದಲ್ಲಿ ಪವಿತ್ರೀಕರಣ ಸಮಾರಂಭ ನಡೆಸಲಾಯಿತು.
ಈ ದೇವಾಲಯವನ್ನು BAPS ಸಂಸ್ಥೆ “ದಕ್ಷಿಣ ಗೋಳಾರ್ಧದ ಅತಿ ದೊಡ್ಡ ಹಿಂದೂ ಸಾಂಸ್ಕೃತಿಕ ಸಂಕೀರ್ಣ”ವೆಂದು ಬಣ್ಣಿಸಿದೆ. ಇದು ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.
ಉದ್ಘಾಟನೆಗೆ ಮುನ್ನ, ಶನಿವಾರ ಜೋಹಾನ್ಸ್ಬರ್ಗ್ನಲ್ಲಿ ಭವ್ಯ ನಗರ ಯಾತ್ರೆ ಮೆರವಣಿಗೆ ನಡೆಯಿತು. ಭಕ್ತಿಗೀತೆಗಳು, ಸಂಗೀತ, ಮೆರವಣಿಗೆ ಬ್ಯಾಂಡ್ಗಳು ಮತ್ತು ನೃತ್ಯಗಳೊಂದಿಗೆ ಈ ಮೆರವಣಿಗೆ ವಿಶೇಷ ಆಕರ್ಷಣೆಯಾಗಿತ್ತು.