ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi) ಅವರು ಭಯೋತ್ಪಾದಕರ ವಿರುದ್ಧ ತೀವ್ರ ಎಚ್ಚರಿಕೆ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರ ದಾಳಿಯನ್ನು (Terrorists) ನೆನಪಿಸಿಕೊಂಡ ಅವರು, “ಒಬ್ಬೊಬ್ಬ ಉಗ್ರನನ್ನೂ ಹುಡುಕಿ ಹೊಡೆಯಲಿದ್ದೇವೆ. ಅವರಿಗೆ ತಕ್ಕ ಶಿಕ್ಷೆ ಖಚಿತ” ಎಂದಿದ್ದಾರೆ.
ಬಿಹಾರದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಈ ದಾಳಿಯು ಕೇವಲ ಜನರ ಮೇಲೆ ಅಲ್ಲ, ಭಾರತದ ಆತ್ಮದ ಮೇಲೆಯೂ ಆಗಿದೆ ಎಂದು ಹೇಳಿದ್ದಾರೆ. “ಯಾರು ಈ ದುಸ್ಸಾಹಸ ಮಾಡಿದ್ದಾರೆ, ಅವರು ಊಹಿಸಲೂ ಸಾಧ್ಯವಿಲ್ಲದಂತಹ ಶಿಕ್ಷೆಗೆ ಒಳಗಾಗಲಿದ್ದಾರೆ,” ಎಂದರು.
ಭಾರತವು ಭಯೋತ್ಪಾದಕರ ವಿರುದ್ಧ ಯಾವತ್ತೂ ತಲೆಬಾಗುವುದಿಲ್ಲ ಎಂದು ಅವರು ಹೇಳಿದರು. “ಭಾರತೀಯರ ಒಗ್ಗಟ್ಟಿನಿಂದ ಭಯೋತ್ಪಾದಕರ ಬೆನ್ನು ಮುರಿಯುವುದು ಕೇವಲ ಸಮಯದ ಪ್ರಶ್ನೆ,” ಎಂದು ಮೋದಿ ತಿಳಿಸಿದ್ದಾರೆ. “ಈ ದಾಳಿ ದೇಶದ ಶತ್ರುಗಳಿಂದ ಕೇವಲ ನಿರಾಯುಧ ಪ್ರವಾಸಿಗರ ಮೇಲೆ ಆಗಿಲ್ಲ, ಇದು ನಮ್ಮ ದೇಶದ ಒಗ್ಗಟ್ಟಿನ ಮೇಲಿನ ದಾಳಿ.”
ಪಹಲ್ಗಾಮ್ ನಲ್ಲಿ ಮೃತರಾದವರಲ್ಲಿ ವಿವಿಧ ಭಾಷೆಗಳವರು ಇದ್ದರೂ, ಅವರ ಸಾವಿಗೆ ಇಡೀ ದೇಶದಲ್ಲಿ ಒಂದೇ ರೀತಿಯ ಆಕ್ರೋಶವಿದೆ ಎಂದು ಅವರು ಹೇಳಿದರು. “ಕನ್ನಡ, ಹಿಂದಿ, ಮರಾಠಿ, ಗುಜರಾತಿ, ಬಂಗಾಳಿ – ಎಲ್ಲ ಭಾಷೆಯವರು ಇದ್ದರೂ, ಆ ನೋವಿಗೆ ಭಾರತವಾಸಿಗಳ ಮನಸ್ಸು ಒಂದಾಗಿದೆ,” ಎಂದರು.
ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಿ ಸಂತಾಪ ಸೂಚಿಸಿದರು. “ಯಾರೋ ತಮ್ಮ ಮಗನನ್ನು ಕಳೆದುಕೊಂಡಿದ್ದಾರೆ, ಯಾರೋ ತಮ್ಮ ಸಹೋದರನನ್ನು. ಈ ನೋವಿನಲ್ಲಿ ಇಡೀ ದೇಶ ಅವರುಗಳ ಜೊತೆಗಿದೆ,” ಎಂದರು. ಸರ್ಕಾರ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಇದು ಮೋದಿ ಅವರ ಉಗ್ರರ ವಿರುದ್ಧ ನೀಡಿದ ಖಡಕ್ ಸಂದೇಶವಾಗಿದ್ದು, ಭದ್ರತೆ ಮತ್ತು ರಾಷ್ಟ್ರದ ಏಕತೆ ಕುರಿತು ಅವರ ದೃಢ ನಿಲುವನ್ನು ತೋರಿಸುತ್ತದೆ.