Ramanagar: ”ರಾಮನಗರ ಪಟ್ಟಣದ ಅಭಿವೃದ್ಧಿಗೆ ₹150 ಕೋಟಿ ಹಾಗೂ ನೀರಾವರಿ ಇಲಾಖೆಯಿಂದ ₹400 ಕೋಟಿ ಅನುದಾನ ನೀಡಲಾಗಿದೆ. ಸತ್ತೇಗಾಲದಿಂದ ಶಾಶ್ವತ ಕುಡಿಯುವ ನೀರಿನ ಯೋಜನೆ ತರಲಾಗುತ್ತಿದೆ. ರಾಮನಗರ ಜಿಲ್ಲೆಗೆ ಹೊಸ ರೂಪ ನೀಡಲಾಗುವುದು” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DCM D.K. Shivakumar) ಹೇಳಿದ್ದಾರೆ.
ಅವರು ರಾಮನಗರ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
”100 ಎಕರೆ ಪ್ರದೇಶ ಗುರುತಿಸಿ ಬಡವರಿಗೆ ನಿವೇಶನ ಹಂಚಿಕೆಗೆ ಸೂಚನೆ ನೀಡಿದ್ದೇನೆ. ಚನ್ನಪಟ್ಟಣದಲ್ಲಿ 2000ಕ್ಕಿಂತ ಹೆಚ್ಚು ನಿವೇಶನಗಳು ಹಂಚಲಾಗಿದೆ. ವಸತಿ ಸಚಿವ ಜಮೀರ್ 40 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದಾರೆ. ನಿಮ್ಮ ಊರಿನಲ್ಲಿಯೇ ಉದ್ಯೋಗ ಸಿಗುವಂತೆ ಸರ್ಕಾರ ಪಣ ತೊಟ್ಟಿದೆ”.
”ನಾವು ಮಾಡುವ ಕೆಲಸಗಳಿಗೆ ಟೀಕೆಗಳು ಬರುತ್ತವೆ. ಆದರೆ ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ನಮ್ಮ ಶಾಸಕರು ಸದಾ ನಿಮ್ಮ ಜೊತೆ ಇರುತ್ತಾರೆ. ಬಡತನ ಮತ್ತು ಸಂಪತ್ತು ಶಾಶ್ವತವಲ್ಲ, ಆದರೆ ಕಾರ್ಯಗಳು ಶಾಶ್ವತ”. ಎಂದು ಡಿಕೆಶಿ ತಿಳಿಸಿದರು.
”ಯಾರು ಎಷ್ಟೇ ಯತ್ನಿಸಿದರೂ ಬೆಂಗಳೂರು ದಕ್ಷಿಣ ಹೆಸರನ್ನು ಅಳಿಸಲಾಗದು. 25-30 ವರ್ಷ ಅಧಿಕಾರ ಕೊಟ್ಟರೂ ಫಲಿತಾಂಶ ಶೂನ್ಯ. ಬರೀ ಖಾಲಿ ಮಾತುಗಳು” ಎಂದು ಡಿಕೆಶಿ ಹೆಚ್.ಡಿ. ಕುಮಾರಸ್ವಾಮಿಗೆ ಹೆಸರು ಉಲ್ಲೇಖಿಸದೇ ಟೀಕಿಸಿದರು.
”ಅಂಬೇಡ್ಕರ್ ಅವರನ್ನು ಕೇವಲ ಜಾತಿಗೆ ಸೀಮಿತಗೊಳಿಸಲಾಗುತ್ತಿದೆ. ಅವರು ಎಲ್ಲರಿಗೂ ಸಮಾನತೆ ನೀಡಿದ ಮಹಾನ್ ನಾಯಕ. ಪ್ರತಿಮೆಗೆ ಪೂಜೆ ಮಾಡುವ ಬದಲು, ಅವರ ತತ್ವಗಳಿಗೆ ಮತ್ತು ಪ್ರತಿಭೆಗೆ ಗೌರವ ನೀಡಬೇಕು” ಎಂದು ಡಿಕೆಶಿ ತಿಳಿಸಿದರು.
”2013–2018ರಲ್ಲಿ ನಾವು ಅಧಿಕಾರದಲ್ಲಿದ್ದಾಗ SESP, TSP ಅನುದಾನಗಳನ್ನು ಮೀಸಲಿಟ್ಟು, ಸೋಲಾರ್ ಯೋಜನೆ, ಗುತ್ತಿಗೆಗಳಲ್ಲಿ ಮೀಸಲಾತಿ ನೀಡಿದೆವು. ಇದು ಅಂಬೇಡ್ಕರ್ ಅವರ ತತ್ವಗಳಿಂದ ಪ್ರೇರಿತ”.
”ಸಂವಿಧಾನ ಬದಲಾವಣೆ ಬಗ್ಗೆ ಆತಂಕವಿದೆ. ರಾಹುಲ್ ಗಾಂಧಿ ಪ್ರಮಾಣ ವಚನದ ವೇಳೆ ಸಂವಿಧಾನ ಹಿಡಿದು ಶಪಥ ಮಾಡಿದರು. ಇದರಿಂದ ಅವರ ನಿಷ್ಠೆ ಸ್ಪಷ್ಟವಾಗಿದೆ. ಖರ್ಗೆ ಅವರ ನಾಯಕತ್ವದಲ್ಲಿ “ಜೈ ಬಾಪು, ಜೈ ಭೀಮ್, ಜೈ ಸಂವಿಧಾನ” ಕಾರ್ಯಕ್ರಮ ನಡೆಯುತ್ತಿದೆ” ಎಂದು ಡಿಕೆಶಿ ತಿಳಿಸಿದರು.