
Sidlaghatta : ಶಿಡ್ಲಘಟ್ಟ ನಗರದ ಡಾಲ್ಫಿನ್ಸ್ ವಿದ್ಯಾಸಂಸ್ಥೆಯಲ್ಲಿ 2024–25ನೇ ಸಾಲಿನ CBSE (ಗ್ರೇಡ್ 10) ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಶನಿವಾರ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಶ್ರೀ ನಾಗರಾಜ್ ಎ, “ವಿದ್ಯಾರ್ಥಿಗಳ ಯಶಸ್ಸಿಗೆ ಪೋಷಕರು ಮತ್ತು ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ಅವರ ಸತತ ಬೆಂಬಲ ಮತ್ತು ಮಾರ್ಗದರ್ಶನವೇ ಮಕ್ಕಳನ್ನು ಉನ್ನತಿಗೆ ಕೊಂಡೊಯ್ಯುತ್ತದೆ. ಈ ವಿದ್ಯಾರ್ಥಿಗಳು ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ” ಎಂದು ತಿಳಿಸಿದರು.
ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಮಾತನಾಡಿ ಮಕ್ಕಳಲ್ಲಿ ಪರಿಶ್ರಮ, ನಿಷ್ಠೆ ಮತ್ತು ಸಮಯಪ್ರಜ್ಞೆಯ ಅಗತ್ಯತೆಯನ್ನು ತಿಳಿಸಿದರು, “ಸತತ ಪ್ರಯತ್ನದಿಂದ ಯಾವುದೇ ಗುರಿಯನ್ನೂ ಸಾಧಿಸಬಹುದು,” ಎಂದು ಅವರು ಹೇಳಿದರು.
ಸಂಸ್ಥೆಯ ಪ್ರಾಂಶುಪಾಲ ಎಲ್. ಮನಿಕೃಷ್ಣಪ್ಪ ಅವರು ಮಾತನಾಡಿ, ನಿರಂತರ ಕಲಿಕೆಯಿಂದ ಯಶಸ್ಸು ಸಾಧ್ಯವೆಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಅನೀಶ್, ಜತಿನ್ ರಾಮ್, ದರ್ಶನ್ ರೆಡ್ಡಿ, ಮಾನ್ಯತಾ, ಹರಿಪ್ರಿಯಾ ಸೇರಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಡಾಲ್ಫಿನ್ಸ್ ವಿದ್ಯಾಸಂಸ್ಥೆಯ ಆಡಳಿತ ಅಧಿಕಾರಿಗಳಾದ ಶ್ರೀಮತಿ ಚಂದನ ಬಿ ಎಸ್ ರವರು ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಅಭಿನಂದಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿದ್ಯಾರ್ಥಿಗಳು “ಗುರುಗಳ ಮಾರ್ಗದರ್ಶನದಿಂದ ನಾವು ಈ ಮಟ್ಟಕ್ಕೆ ಬೆಳೆದಿದ್ದೇವೆ. ನಮ್ಮ ನಂತರದವರೂ ಈ ಹಾದಿಯನ್ನು ಅನುಸರಿಸಲಿ” ಎಂದು ಹೇಳಿದರು.
ಕನ್ನಡ ಶಿಕ್ಷಕ ರಾಮಾಂಜಿ ಎನ್ ಸ್ವಾಗತಿಸಿದರು, ಶ್ರೀನಿವಾಸಯ್ಯ ವಂದಿಸಿದರು ಹಾಗೂ ಶಿಕ್ಷಕಿ ಸುನಿತ ನಿರೂಪಿಸಿದರು. ಡಾಲ್ಫಿನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಸುದರ್ಶನ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀನಿವಾಸ ಮೂರ್ತಿ, ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಆರಿಫ್ ಅಹಮದ್, ಶಿಕ್ಷಕರಾದ ಭರತ್, ರವಿಕುಮಾರ್, ರಾಧ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.