Bengaluru: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ಹಿನ್ನೆಲೆಯಲ್ಲಿ, ಬಂಧನ ಭೀತಿಯಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಆಡಳಿತ ಸಮಿತಿ ಹೈಕೋರ್ಟ್ (High Court) ಮೊರೆ ಹೋಗಿದೆ. FIR ರದ್ದುಗೊಳಿಸಬೇಕೆಂದು ಅವರು ಅರ್ಜಿ ಸಲ್ಲಿಸಿದ್ದಾರೆ.
KSCA ಅಧ್ಯಕ್ಷ ರಘುರಾಮ್ ಭಟ್, ಕಾರ್ಯದರ್ಶಿ ಎ.ಶಂಕರ್ ಮತ್ತು ಖಜಾಂಚಿ ಇ.ಎಸ್. ಜಯರಾಮ್ ಅರ್ಜಿ ಸಲ್ಲಿಸಿದ್ದು, ಇದು ನ್ಯಾಯಮೂರ್ತಿ ಕೃಷ್ಣ ಕುಮಾರ್ ಅವರ ಪೀಠದ ಮುಂದೆ ಮಧ್ಯಾಹ್ನ 2.30ಕ್ಕೆ ವಿಚಾರಣೆಗೆ ನಿಗದಿಯಾಗಿದೆ.
ಅರ್ಜಿಯಲ್ಲಿರುವ ಮಾಹಿತಿಗಳು
- ಈಗಾಗಲೇ ಯುಡಿಆರ್ ದಾಖಲಾಗಿದ್ದು, ಇದೀಗ FIR ಕೂಡ ದಾಖಲಾಗಿದೆ.
- ಒಂದೇ ಪ್ರಕರಣಕ್ಕೆ ಎರಡು ಬಾರಿ ತನಿಖೆ ನಡೆಸುವುದು ಕಾನೂನುಬಾಹಿರ.
- ಇದೇ ವಿಷಯದ ಕುರಿತು ಹೈಕೋರ್ಟ್ ಈಗಾಗಲೇ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸುತ್ತಿದೆ.
- ಮತ್ತೊಂದು FIR ದಾಖಲಿಸುವುದು ಅಸಂಗತ.
ಘಟನೆ ಕುರಿತು ಸಮಿತಿಯ ಸ್ಪಷ್ಟನೆ
- ನೂಕುನುಗ್ಗಲು ಮುಖ್ಯಮಂತ್ರಿ, ಸಚಿವರು ಭಾಗವಹಿಸಿದ್ದ ಸರಕಾರಿ ಸಮಾರಂಭದ ಬಳಿಕ ಸಂಭವಿಸಿದೆ.
- ಕ್ರೀಡಾಂಗಣದ ಬಾಗಿಲು ನಿರ್ವಹಣೆ RCB ಮತ್ತು ಪೊಲೀಸರ ಹೊಣೆ.
- ಕೆಎಸ್ಸಿಎ ಕೇವಲ ಮೈದಾನವನ್ನು ಬಾಡಿಗೆಗೆ ನೀಡಿದ್ದು, ಜನನಿಯಂತ್ರಣ ಅವರ ಹೊಣೆ ಅಲ್ಲ.
- ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು, ಯಾವುದೇ ಸಾಕ್ಷ್ಯವಿಲ್ಲದೆ ಪ್ರಕರಣ ದಾಖಲಿಸಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.
ಮುಖ್ಯಮಂತ್ರಿಗಳು ಬಂಧನಕ್ಕೆ ಸೂಚನೆ ನೀಡಿದ್ದು, ಇದು ಅಧಿಕಾರ ಮೀರಿದ ಕ್ರಮ. ತನಿಖಾಧಿಕಾರಿ ನಿರ್ಧಾರ ಮಾಡಬೇಕು ಎಂಬುದು ಕಾನೂನಿನ ನಿಯಮ. ಸೂಚನೆಯಿಂದ ಅರ್ಜಿದಾರರು ಅವಮಾನಕ್ಕೆ ಗುರಿಯಾಗುತ್ತಿದ್ದಾರೆ.
FIR ಮತ್ತು ಮುಂದಿನ ವಿಚಾರಣಾ ಕ್ರಮ ರದ್ದುಪಡಿಸಬೇಕು. ವಿಚಾರಣೆಗೂ ತಡೆ ನೀಡಬೇಕೆಂದು ಮಧ್ಯಂತರ ಮನವಿ ಸಲ್ಲಿಸಲಾಗಿದೆ.