
Handiganala, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿಯಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಕೃಷಿ ವಿಜ್ಞಾನ ಕೇಂದ್ರದ (ಬೇಸಾಯ ಶಾಸ್ತ್ರ) ವಿಜ್ಞಾನಿ ವಿಶ್ವನಾಥ್ ಕಾರ್ಯಕ್ರಮದಲ್ಲಿ ಸಾವಯವ ಕೃಷಿಯ ಬಗ್ಗೆ ಮಾಹಿತಿಯನ್ನು ನೀಡಿದರು. ತೋಟಗಾರಿಕಾ ವಿಜ್ಞಾನಿ ಪ್ರವೀಣ್ ಕುಮಾರ. ಆರ್ ಅವರು ತೋಟಗಾರಿಕಾ ಬೆಳೆಗಳಲ್ಲಿ ಇರುವ ನೂತನ ತಂತ್ರಜ್ಞಾನಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.
ಗೃಹ ವಿಜ್ಞಾನ ವಿಜ್ಞಾನಿ ಸೌಮ್ಯ ಹಿರೇಗೌಡರ್ ತರಕಾರಿ ಬೆಳೆಗಳ ಕಟಾವು ಮತ್ತು ಸಂಸ್ಕರಣೆಯ ಬಗ್ಗೆ ವಿವರಿಸಿದರು. ಪ್ರಗತಿಪರ ರೈತ ಎ.ಎಂ. ತ್ಯಾಗರಾಜ್ ಅವರು ಸುಸ್ಥಿರ ಕೃಷಿಗೆ ಸಾವಯುವ ಕೃಷಿ ಮಹತ್ವವನ್ನು ರೈತರಿಗೆ ಮನವರಿಕೆ ಮಾಡಿಕೊಟ್ಟರು. ಅದರಲ್ಲಿ ಪ್ರಮುಖವಾಗಿ ಜೀವಾಮೃತ, ಬೀಜಾಮೃತ, ಪಂಚಗವ್ಯ, ಹಸಿರೆಲೆ ಗೊಬ್ಬರದ ಮಹತ್ವ, ಮಣ್ಣು ಪರೀಕ್ಷೆ, ಪರಿಸರ ಸ್ನೇಹಿ ರೋಗ ಮತ್ತು ಕೀಟ ನಿರ್ವಹಣೆ, ಕೃಷಿ ವಿಶ್ವವಿದ್ಯಾಲಯದ ಬೀಜಗಳ ಆಯ್ಕೆ, ಬೀಜೋಪಚಾರ ಮತ್ತು ಇತರ ತಂತ್ರಜ್ಞಾನಗಳ ಬಗ್ಗೆ ಮಾಹಿತಿಯನ್ನು ರೈತರಿಗೆ ತಿಳಿಸಿಕೊಟ್ಟರು. ಪ್ರಗತಿ ಪರ ರೈತ ಮುನೇಂದ್ರ ಉತ್ತಮ ಬೆಳೆಗೆ ಬೀಜದ ಆಯ್ಕೆ ಮುಖ್ಯ ಎಂದು ರೈತರಿಗೆ ಹೇಳಿದರು.
ಈ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ, ರೇಷ್ಮೆ ಇಲಾಖೆ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಇಲಾಖೆಯ ಯೋಜನೆಗಳ ಬಗ್ಗೆ ಮತ್ತು ಬೆಳೆ ವಿಮೆಯ ಬಗ್ಗೆ ರೈತರಿಗೆ ಮಾಹಿತಿಯನ್ನು ತಿಳಿಸಿದರು.