Delhi: ಇರಾನ್ ಹಾಗೂ ಇಸ್ರೇಲ್ ನಡುವೆ ನಡೆಯುತ್ತಿರುವ ಗಂಭೀರ ಸಂಘರ್ಷದ ಹಿನ್ನೆಲೆದಲ್ಲಿ, ಇರಾನ್ ನಲ್ಲಿರುವ ಭಾರತೀಯ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಸಲುವಾಗಿ ಭಾರತ ಸರ್ಕಾರ ಬುಧವಾರ “ಆಪರೇಷನ್ ಸಿಂಧು” (Operation Sindh) ಎಂಬ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
ಇದರ ನಡುವೆಯೇ, ಟೆಹ್ರಾನ್ನ ಕೇಶವರ್ಜ್ ರಸ್ತೆ ಬಳಿಯ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳ ಹಾಸ್ಟೆಲ್ ಮೇಲೆ ನಡೆದ ದಾಳಿಯಲ್ಲಿ ಕೆಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು, ಇರಾನ್ ವಿದೇಶಾಂಗ ಇಲಾಖೆ ಮತ್ತು ಟೆಹ್ರಾನ್ನ ಭಾರತೀಯ ಮಿಷನ್ ಪರಸ್ಪರ ಸಂಪರ್ಕದಲ್ಲಿವೆ ಎಂದು ತಿಳಿಸಲಾಗಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಹೇಳುವಂತೆ, “ವಿದೇಶದಲ್ಲಿರುವ ಭಾರತೀಯರ ಸುರಕ್ಷತೆ ನಮ್ಮ ಮೊದಲ ಆದ್ಯತೆ.” ಈಗಿರುವ ಮಾಹಿತಿ ಪ್ರಕಾರ, ಇರಾನ್ ನಲ್ಲಿ ಸುಮಾರು 4,000ಕ್ಕೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚಿನವರು ವಿದ್ಯಾರ್ಥಿಗಳಾಗಿದ್ದಾರೆ.
ಮಂಗಳವಾರ, ಭಾರತ ರಾಯಭಾರ ಕಚೇರಿ ಉತ್ತರ ಇರಾನ್ನಿಂದ 110 ಮಂದಿ ಭಾರತೀಯ ವಿದ್ಯಾರ್ಥಿಗಳನ್ನು ಅರ್ಮೇನಿಯಾ ದೇಶಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಿದೆ. ಅವರು ರಸ್ತೆ ಮೂಲಕ ಅರ್ಮೇನಿಯಾದ ರಾಜಧಾನಿ ಯೆರೆವಾನ್ಗೆ ಪ್ರಯಾಣಿಸಿದ್ದಾರೆ. ನಂತರ, ಜೂನ್ 18ರಂದು ಮಧ್ಯಾಹ್ನ ಯೆರೆವಾನ್ನಿಂದ ವಿಶೇಷ ವಿಮಾನದಲ್ಲಿ ಹೊರಟು, ಈ ಕಾರ್ಯಾಚರಣೆಯ ಮೊದಲ ಹಂತದಲ್ಲಿ ಜೂನ್ 19ರ ಮುಂಜಾನೆ ನವದೆಹಲಿಗೆ ಬಂದಿದ್ದಾರೆ.
ಈ ಸ್ಥಳಾಂತರ ಪ್ರಕ್ರಿಯೆಗೆ ಸಹಕಾರ ನೀಡಿದ ಇರಾನ್ ಮತ್ತು ಅರ್ಮೇನಿಯಾ ಸರ್ಕಾರಗಳಿಗೆ ಭಾರತ ಕೃತಜ್ಞತೆ ಸಲ್ಲಿಸಿದೆ.
ಇದಕ್ಕಿಂತಲೂ ಹೆಚ್ಚಿನ ಭಾರತೀಯರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಲು ಟೆಹ್ರಾನ್ನ ಭಾರತೀಯ ರಾಯಭಾರ ಕಚೇರಿ ನಿರಂತರ ಪ್ರಯತ್ನದಲ್ಲಿ ತೊಡಗಿದೆ. ಪ್ರಸ್ತುತ ಇರುವುದು ಯುದ್ಧ ಪರಿಸ್ಥಿತಿ ಆಗಿರುವುದರಿಂದ, ಭಾರತೀಯರಿಗೆ ಲಭ್ಯವಿರುವ ಎಲ್ಲಾ ಆಯ್ಕೆಗಳನ್ನು ಬಳಸಿಕೊಂಡು ಅವರಿಗೆ ಸಹಾಯ ಮಾಡಲಾಗುತ್ತಿದೆ.
ಇರಾನ್ ನಲ್ಲಿರುವ ಭಾರತೀಯ ನಾಗರಿಕರು ತುರ್ತು ಸಹಾಯಕ್ಕಾಗಿ ಟೆಹ್ರಾನ್ನ ಭಾರತೀಯ ರಾಯಭಾರ ಕಚೇರಿಯ ತುರ್ತು ಸಂಪರ್ಕ ಸಂಖ್ಯೆಯೊಂದಿಗೆ ಅಥವಾ ನವದೆಹಲಿಯ ಎಂಇಎ ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಸರ್ಕಾರ ತಿಳಿಸಿದೆ.