
Jangamakote, Sidlaghatta : ನಮ್ಮ ಮಕ್ಕಳಿಗೆ, ಯುವ ಜನರಿಗೆ ನಾವು ಆಸ್ತಿ ಅಂತಸ್ತು ಹಣವನ್ನು ಕೊಡುವುದಲ್ಲ. ಬದಲಿಗೆ ಸಂಸ್ಕಾರವನ್ನು ಹೇಳಿಕೊಡಬೇಕು ಮತ್ತು ಸಂಸ್ಕಾರವನ್ನೆ ಬಳುವಳಿಯಾಗಿ ಕೊಡಬೇಕಿದೆ ಎಂದು ವಿಜಯಪುರ ಬಸವ ಕಲ್ಯಾಣ ಮಠದ ಶ್ರೀಮಹದೇವಸ್ವಾಮಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಹೊಸಪೇಟೆ ಗ್ರಾಮದಲ್ಲಿ ಶುಕ್ರವಾರ ನಡೆದ ಶ್ರೀಮುನೇಶ್ವರಸ್ವಾಮಿ ಮತ್ತು ಸಪ್ತಮಾತೃಕೆದೇವಿಯ ದೇವಾಲಯ ಉದ್ಘಾಟನೆ ಮತ್ತು ನೂತನ ಶಿಲಾ ವಿಗ್ರಹಗಳ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.
ನಮ್ಮ ಮಕ್ಕಳು ಮತ್ತು ಯುವಜನರಿಗೆ ಸಂಸ್ಕಾರ, ದೇವರು, ತಂದೆ, ತಾಯಿ, ಧರ್ಮ ಎಂದರೆ ಏನು ಎಂದು ತಿಳಿಸಿಕೊಡಬೇಕು, ಅವುಗಳ ಮಹತ್ವವನ್ನು ಕೂಡ ಮನನ ಮಾಡಿಕೊಡಬೇಕು ಎಂದರು.
ಧರ್ಮ ಎಂದರೆ ಇನ್ನೊಬ್ಬರಿಗೆ ಕೆಡುಕನ್ನು ಬಯಸದೆ ಎಲ್ಲರಿಗೂ ಒಳ್ಳೆಯದಾಗುವ, ಎಲ್ಲರ ಹಿತ ಕಾಯುವ ಕಾಯಕ ಮಾಡುವುದೆ ಧರ್ಮ ಎಂದು ಧರ್ಮದ ಮಹತ್ವವನ್ನು ವಿವರಿಸಿದರು.
ಗ್ರಾಮಗಳಲ್ಲಿ ಎಲ್ಲರೂ ಒಟ್ಟುಗೋಡಿ ಹಳೆಯ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡುವುದು, ನಿತ್ಯ ಪೂಜೆ ಮಾಡುವುದು, ಇತರರಿಗೆ ಒಳ್ಳೆಯದನ್ನೇ ಬಯಸುವ ಮತ್ತು ಒಳ್ಳೆಯದನ್ನೇ ಮಾಡುವುದನ್ನೆ ಸನಾತನ ಧರ್ಮ ಹೇಳುತ್ತದೆ. ಅದನ್ನು ಎಲ್ಲರೂ ಪಾಲಿಸೋಣ ಎಂದು ಹೇಳಿದರು.
ನಮ್ಮ ಮಕ್ಕಳಿಗೆ ನಾವು ಉತ್ತಮ ಶಿಕ್ಷಣವನ್ನು ಕೊಡಿಸುತ್ತಿದ್ದೇವೆ. ಅದಷ್ಟೆ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯವಿಲ್ಲ. ಶಿಕ್ಷಣದ ಜತೆಗೆ ಧರ್ಮ, ಸಂಸ್ಕಾರ, ತಂದೆ, ತಾಯಿ, ಗುರುಗಳ ಮಹತ್ವವನ್ನು ತಿಳಿಸುವ ಮೂಲಕ ಅವರನ್ನು ಸಂಸ್ಕಾರವಂತರನ್ನಾಗಿ ಮಾಡಬೇಕಿದೆ ಎಂದು ಹೇಳಿದರು.
ಶ್ರೀಮುನೇಶ್ವರಸ್ವಾಮಿ ಮತ್ತು ಸಪ್ತ ಮಾತೃಕೆದೇವಿಯ ದೇವಾಲಯ ಉದ್ಘಾಟನೆ ಮತ್ತು ನೂತನ ಶಿಲಾ ವಿಗ್ರಹಗಳ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ವಿಶೇಷ ಹೂವಿನ ಅಲಂಕಾರ ಮಾಡಿ ನಾನಾ ವಿಧದ ಹೋಮವನ್ನು ನಡೆಸಿ ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಗ್ರಾಮದ ಹಿರಿಯರಾದ ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಕೆಎಂಎಫ್ ನಿರ್ದೇಶಕ ಆರ್.ಶ್ರೀನಿವಾಸ್, ಕೆಪಿಸಿಸಿ ಸಂಯೋಜಕ ರಾಜೀವ್ಗೌಡ, ವೆಂಕಟೇಶ್ವರ ಇಂಜಿನಿಯರಿಂಗ್ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕ ಎಂ.ಶಶಿಧರ್, ಬಿಜೆಪಿ ಮುಖಂಡ ಸೀಕಲ್ ಆನಂದಗೌಡ, ಕಾಂಗ್ರೆಸ್ ಮುಖಂಡ ಪುಟ್ಟು ಆಂಜಿನಪ್ಪ, ಗೌತಮ್,ಶಶಿಕುಮಾರ್, ಮಂಜುನಾಥಗೌಡ, ಬಸವಾಪಟ್ಟಣ ಬೈರೇಗೌಡ, ಬೀರೇಗೌಡ, ಬಸಪ್ಪ, ರಮೇಶ್, ವೆಂಕಟರೆಡ್ಡಿ, ಘಟ್ಟಮಾರನಹಳ್ಳಿ ಪ್ರಕಾಶ್, ಅಶೋಕ್ ಹಾಜರಿದ್ದರು.