Delhi: ಇರಾನ್ ತನ್ನ ಪರಮಾಣು ಕಾರ್ಯಕ್ರಮಕ್ಕೆ ಅಮೆರಿಕ ಮತ್ತು ಇಸ್ರೇಲ್ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದು, ಆ ದೇಶದ ಮೇಲೆ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಭಾರತದಲ್ಲಿ ಕೆಲ ರಾಜಕೀಯ ಪಕ್ಷಗಳು, ಸಂಸದರು, ಧಾರ್ಮಿಕ ಮುಖಂಡರು ಹಾಗೂ ಜನರು ಇರಾನ್ಗೆ (Iran) ಬೆಂಬಲ ನೀಡಿದ್ದಾರೆ. ಇದಕ್ಕಾಗಿ ಇರಾನ್ ದೇಶ ಧನ್ಯವಾದ ವ್ಯಕ್ತಪಡಿಸಿದೆ.
ಭಾರತದಲ್ಲಿನ ಇರಾನ್ ರಾಯಭಾರಿ ಕಚೇರಿಯು ಬುಧವಾರ ಒಂದು ಹೇಳಿಕೆ ಬಿಡುಗಡೆ ಮಾಡಿದ್ದು, ಅದು ನೇರವಾಗಿ ಭಾರತೀಯ ಸರ್ಕಾರದ ಬಗ್ಗೆ ಉಲ್ಲೇಖಿಸಿಲ್ಲ. ಆದರೆ ಕೊನೆಯಲ್ಲಿ “ಜೈ ಇರಾನ್ – ಜೈ ಹಿಂದ್” ಎಂದು ಹೇಳಲಾಗಿದೆ.
ಹೇಳಿಕೆಯಲ್ಲಿ ಇರಾನ್ ರಾಯಭಾರಿ ಕಚೇರಿ ಹೀಗೆ ತಿಳಿಸಿದೆ, “ಭಾರತದ ರಾಜಕೀಯ ಪಕ್ಷಗಳು, ಸಂಸದರು, ಧಾರ್ಮಿಕ ನಾಯಕರು, ಪ್ರಾಧ್ಯಾಪಕರು, ಮಾಧ್ಯಮ, ಸಮಾಜ ಸೇವಕರು ಮತ್ತು ದೇಶದ ಜನರು ತೋರಿಸಿದ ಬೆಂಬಲಕ್ಕೆ ನಾವು ಹೃತ್ಪೂರ್ವಕವಾಗಿ ಧನ್ಯವಾದ ಅರ್ಪಿಸುತ್ತೇವೆ.”
ಇಡೀ ಸಂಘರ್ಷದ ಸಂದರ್ಭದಲ್ಲಿ, ಭಾರತದ ಹಲವು ನಾಯಕರು ಶಾಂತಿಯ ಸಂದೇಶಗಳನ್ನು ನೀಡಿದ್ದಾರೆ. ಇದು ತಾಯ್ನಾಡು ರಕ್ಷಣೆ ಮಾತ್ರವಲ್ಲದೇ, ಅಂತಾರಾಷ್ಟ್ರೀಯ ಕಾನೂನು ಮತ್ತು ಮಾನವೀಯ ಮೌಲ್ಯಗಳ ರಕ್ಷಣೆಯ ಹೋರಾಟವೂ ಆಗಿತ್ತು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಇದು ರಾಜಕೀಯ ದೃಷ್ಟಿಕೋನವಲ್ಲ. ನ್ಯಾಯ, ಕಾನೂನು ಮತ್ತು ಜಾಗತಿಕ ಶಾಂತಿಯ ಪರ ನಿಲುವಾಗಿ ಇರಾನ್ ಈ ಬೆಂಬಲವನ್ನು ವೀಕ್ಷಿಸುತ್ತಿದೆ. ಇರಾನ್ ಎಂದೂ ಆಕ್ರಮಣಕಾರಿ ನೀತಿಗಳಿಗೆ ವಿರುದ್ಧವಾಗಿದ್ದು, ಶಾಂತಿಯ ಪರ ನಿಂತಿದೆ ಎಂದು ತಿಳಿಸಿದೆ.
ಇದೇ ವೇಳೆ, ಇಸ್ರೇಲ್ ಮತ್ತು ಅಮೆರಿಕ ದಾಳಿಯ ಸಂದರ್ಭದಲ್ಲಿ ಭಾರತ ಸರ್ಕಾರ ಮೌನವಹಿಸಿದ್ದಕ್ಕೆ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಪ್ರಶ್ನೆ ಎತ್ತಿದವು. ಪ್ರಧಾನಿ ಮೋದಿ ಅವರು ನಂತರ ಇರಾನ್ ಅಧ್ಯಕ್ಷರನ್ನು ಕರೆ ಮಾಡಿ ಸಂಘರ್ಷ ಬಗೆಹರಿಸಲು ಮಾತುಕತೆ ನಡೆಸುವ ಸಲಹೆ ನೀಡಿದ್ದರು. ಆ ನಂತರ ಕದನ ವಿರಾಮ ಸಂಭವಿಸಿದ್ದು, ಭಾರತ ಸರ್ಕಾರ ಅದನ್ನು ಸ್ವಾಗತಿಸಿತು.