Belagavi : ಅಧಿಕಾರ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಿದೆ. ಪಾಲಿಕೆಯ ಹಾಲಿ ಮೇಯರ್ ಮಂಗೇಶ ಪವಾರ್ ಮತ್ತು ಸದಸ್ಯ ಜಯಂತ್ ಜಾಧವ್ ಅವರ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್ ಅವರು ಆದೇಶ ನೀಡಿದ್ದಾರೆ.
ಈ ಇಬ್ಬರು, ತಿನಿಸು ಕಟ್ಟೆ ಪ್ರದೇಶದಲ್ಲಿ ತಮ್ಮ ಪತ್ನಿಯ ಹೆಸರಿನಲ್ಲಿ ಮಳಿಗೆ ಪಡೆದಿರುವ ಆರೋಪ. ಸಾಮಾಜಿಕ ಹೋರಾಟಗಾರ ಸುಜೀತ್ ಮುಳುಗುಂದ ಅವರು ಈ ಬಗ್ಗೆ ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದರು. ನಂತರ ಪ್ರಾದೇಶಿಕ ಆಯುಕ್ತ ಎಸ್ಬಿ ಶೆಟ್ಟೆನ್ನವರ್ ಅವರು ವಿಚಾರಣೆ ನಡೆಸಿ ಸದಸ್ಯತ್ವ ರದ್ದುಪಡಿಸುವ ಆದೇಶ ಹೊರಡಿಸಿದ್ದರು.
ಈ ರದ್ದತಿ ವಿರುದ್ಧ ಇಬ್ಬರೂ ಸದಸ್ಯರು ಮೆಟ್ಟಿಲು ಮೇಲ್ಮನವಿ ಸಲ್ಲಿಸಿದ್ದರು ಮತ್ತು ನಂತರ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್, ಸರಕಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿತು. ಅದರಂತೆ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಎರಡೂ ಸದಸ್ಯರ ಸದಸ್ಯತ್ವ ರದ್ದುಪಡಿಸುವ ಅಂತಿಮ ಆದೇಶ ಹೊರಡಿಸಿದ್ದಾರೆ.
ಈ ಕ್ರಮವನ್ನು ಮಹಾನಗರ ಪಾಲಿಕೆ ಅಧಿನಿಯಮ 1976ರ ಸೆಕ್ಷನ್ 26 ಅಡಿಯಲ್ಲಿ ತೆಗೆದುಕೊಳ್ಳಲಾಗಿದೆ. ಇದರಿಂದ ವಾರ್ಡ್ ನಂ. 41 ಮತ್ತು 23 ಸ್ಥಾನಗಳು ಖಾಲಿಯಾಗಿದ್ದು, ಮೇಯರ್ ಸ್ಥಾನವೂ ಅಪಾಯದಲ್ಲಿದೆ.