New Delhi: ಅಹ್ಮದಾಬಾದ್ ಏರ್ಪೋರ್ಟ್ ಬಳಿ ನಿನ್ನೆ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತವು (Ahmedabad plane crash) ಭಾರಿ ದುರ್ಘಟನೆ ಎನಿಸಿಕೊಂಡಿದೆ. ಈ ಅಪಘಾತದಲ್ಲಿ 241 ಪ್ರಯಾಣಿಕರು ಸಾವಿಗೀಡಾಗಿದ್ದು, ಕೇವಲ ಒಬ್ಬರು ಪವಾಡದಂತೆ ಬದುಕುಳಿದಿದ್ದಾರೆ.
ಸತ್ತ ಪ್ರಯಾಣಿಕರ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರವನ್ನು ಏರ್ ಇಂಡಿಯಾ ಘೋಷಿಸಿದೆ. ಅಂತಾರಾಷ್ಟ್ರೀಯ ನಿಯಮದ ಪ್ರಕಾರ, ಕನಿಷ್ಠ 1.42 ಕೋಟಿ ರೂ (1,28,821 SDR) ಪರಿಹಾರ ನೀಡಬೇಕು. SDR (Special Drawing Rights) ಎಂಬುದು ಐಎಂಎಫ್ ನಿರ್ಧರಿಸಿದ ಅಂತರರಾಷ್ಟ್ರೀಯ ಮೌಲ್ಯದ ಅಳತೆ.
ಟಾಟಾ ಗ್ರೂಪ್ ನ ಏರ್ ಇಂಡಿಯಾ ಕಂಪನಿಗೆ 1.72 ಲಕ್ಷ ಕೋಟಿ ರೂ ಮೌಲ್ಯದ ಇನ್ಷೂರೆನ್ಸ್ ಇದೆ. ಅಪಘಾತವಾಗಿರುವ ಬೋಯಿಂಗ್ 787-8 ಡ್ರೀಮ್ಲೈನರ್ ವಿಮಾನವು 2013 ರ ಮಾದರಿ. ಇದಕ್ಕೆ 2021 ರಲ್ಲಿ ₹957 ಕೋಟಿ (115 ಮಿಲಿಯನ್ ಡಾಲರ್) ಇನ್ಷೂರೆನ್ಸ್ ಮಾಡಲಾಗಿತ್ತು.
ಪ್ರತಿಯೊಬ್ಬರೂ ಒಂದೇ ಪರಿಹಾರ ಪಡೆಯುವುದಿಲ್ಲ. ವ್ಯಕ್ತಿಯ ಆದಾಯ, ಕುಟುಂಬದ ಅವಲಂಬನೆ, ದಾಖಲೆಗಳು ಮುಂತಾದ ಆಧಾರದ ಮೇಲೆ ಪರಿಹಾರ ನಿಗದಿಯಾಗುತ್ತದೆ. ಕುಟುಂಬದವರು ಸಂಬಂಧಿತ ದಾಖಲೆಗಳನ್ನು ಸಲ್ಲಿಸಿ ಪರಿಹಾರಕ್ಕೆ ಅರ್ಜಿ ಹಾಕಬೇಕು.
ಏರ್ ಇಂಡಿಯಾ ತನ್ನ ವಿಮಾನಗಳ ಇನ್ಷೂರೆನ್ಸ್ ನ್ಯೂ ಇಂಡಿಯಾ ಅಶೂರೆನ್ಸ್ ಮೂಲಕ ಮಾಡಿಕೊಂಡಿದೆ. ಆದರೆ, ಈ ಕಂಪನಿ ಇಡೀ ಹೊರೆ ಹೊರುವುದಿಲ್ಲ. ಇದು ಸ್ವಿಸ್ ರೀ, ಮ್ಯುನಿಕ್ ರೀ, ಜಿಐಸಿ ರೀ ಮುಂತಾದ ರೀಇನ್ಷೂರೆನ್ಸ್ ಕಂಪನಿಗಳೊಂದಿಗೆ ಹೊರೆ ಹಂಚಿಕೊಂಡಿದೆ. ನ್ಯೂ ಇಂಡಿಯಾ ಅಷೂರೆನ್ಸ್ ಹೊರೆ ಸುಮಾರು 10% ಇರಬಹುದು. ಉಳಿದ ನಷ್ಟವನ್ನು ರೀಇನ್ಷೂರೆನ್ಸ್ ಕಂಪನಿಗಳು ಹೊರುತ್ತವೆ.