
ammu and Kashmir: ನಾಲ್ಕು ದಿನಗಳಿಂದ ಜಮ್ಮು ಕಾಶ್ಮೀರದ ಕಥುವಾದಲ್ಲಿ (Kathua) ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ (Army operation) ನಡೆಯುತ್ತಿದ್ದು, ಇಂದು ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಹಿರಾನಗರ ಕಾರ್ಯಾಚರಣೆಯಿಂದ 30 ಕಿ.ಮೀ ದೂರದಲ್ಲಿರುವ ರಾಜ್ಬಾಗ್ನ ಘಾಟಿ ಜುಥಾನಾ ಪ್ರದೇಶದ ಜಖೋಲೆ ಗ್ರಾಮದಲ್ಲಿ ಕಾರ್ಯಾಚರಣೆ ಮುಂದುವರೆದಿದೆ. ಭಯೋತ್ಪಾದಕರ ಇರುವಿಕೆಯ ಬಗ್ಗೆ ಮಾಹಿತಿ ದೊರಕಿದ ನಂತರ ಭದ್ರತಾ ಪಡೆ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ಈ ವೇಳೆ ಗುಂಡಿನ ಚಕಮಕಿ ನಡೆದಿದೆ. ಭದ್ರತೆ ಹೆಚ್ಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಹಿರಾನಗರ ಸೆಕ್ಟರ್ನಲ್ಲಿ ನಡೆದ ಗುಂಡಿನ ದಾಳಿಯಲ್ಲಿನ ಭಯೋತ್ಪಾದಕರ ಗುಂಪೇ ಇಂದಿನ ದಾಳಿಯಲ್ಲೂ ಭಾಗಿಯಾಗಿರುವ ಸಾಧ್ಯತೆ ಇದೆ. ಅವರು ಗಡಿಯಾಚೆಯಿಂದ ಹೊಸ ಸುರಂಗದ ಮೂಲಕ ನುಸುಳಿರುವ ಶಂಕೆ ವ್ಯಕ್ತವಾಗಿದೆ.
ಭದ್ರತಾ ಪಡೆಗಳಾದ ಪೊಲೀಸ್, ಸೇನೆ, ಎನ್ಎಸ್ಜಿ, ಬಿಎಸ್ಎಫ್ ಮತ್ತು ಸಿಆರ್ಪಿಎಫ್ ಈ ಬೃಹತ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ತಾಂತ್ರಿಕ ಸಹಾಯಕ್ಕಾಗಿ ಹೆಲಿಕಾಪ್ಟರ್, ಡ್ರೋನ್ ಮತ್ತು ಬುಲೆಟ್ ಪ್ರೂಫ್ ವಾಹನಗಳನ್ನೂ ಬಳಸುತ್ತಿದ್ದಾರೆ.
ಸೇನಾ ಪಡೆ ಬಿಲ್ಲವಾರ್ ಅರಣ್ಯದಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಭಯೋತ್ಪಾದಕರ ಸುಳಿವು ಹಿಡಿದಿದ್ದಾರೆ. ಸೋಮವಾರ ಹುರಾನಗರದಲ್ಲಿ ನಡೆಸಿದ ಶೋಧದಲ್ಲಿ ಎಂ4 ಕಾರ್ಬೈನ್ ಮ್ಯಾಗಜಿನ್, ಗ್ರೆನೇಡ್, ಬುಲೆಟ್ಪ್ರೂಫ್ ಜಾಕೆಟ್, ಸ್ಲೀಪಿಂಗ್ ಬ್ಯಾಗ್, ಟ್ರ್ಯಾಕ್ಸೂಟ್ ಮತ್ತು ಸ್ಪೋಟಕ ತಯಾರಿಸಲು ಬಳಸಬಹುದಾದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಡಿಜಿಪಿ ನಳಿನ್ ಪ್ರಭಾತ್ ಹಾಗೂ ಜಮ್ಮು ವಲಯದ ಐಜಿಪಿ ಭೀಮ್ ಸೆನ್ ತುತಿ ನೇತೃತ್ವದಲ್ಲಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ಜಾರಿಯಲ್ಲಿದೆ.