ದೆಹಲಿ: ಭಾರತದ ಗಗನಯಾತ್ರಿಯಾದ ಶುಭಾಂಶು ಶುಕ್ಲಾ ಅವರು ಭಾಗವಹಿಸಲಿರುವ ಆಕ್ಸಿಯಮ್-4 ಬಾಹ್ಯಾಕಾಶ ಮಿಷನ್ (Axiom-4 space mission) ಮತ್ತೊಮ್ಮೆ ಮುಂದೂಡಲಾಗಿದೆ. ಈ ಮಿಷನ್ನ್ನು ಉಡಾವಣೆ ಮಾಡಬೇಕಿದ್ದ ಸ್ಪೇಸ್ಎಕ್ಸ್ ಸಂಸ್ಥೆ, ತಪಾಸಣೆಯ ವೇಳೆ ಬೂಸ್ಟರ್ನಲ್ಲಿ ದ್ರವ ಆಮ್ಲಜನಕ (Liquid Oxygen) ಸೋರಿಕೆ ಕಂಡುಬಂದ ಕಾರಣ ಉಡಾವಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಸ್ಪೇಸ್ಎಕ್ಸ್ ಸಂಸ್ಥೆ ಪ್ರಕಟಣೆಯಲ್ಲಿ, “ನಾವು ಸುರಕ್ಷತೆಯಲ್ಲಿ ಯಾವುದೇ ರೀತಿಯ ಸಡಿಲತೆಗೆ ಒಪ್ಪುವುದಿಲ್ಲ. ಸೋರಿಕೆ ಕಂಡ ಕಾರಣದಿಂದ ಉಡಾವಣೆಯನ್ನು ಮುಂದೂಡಲಾಗಿದೆ,” ಎಂದು ತಿಳಿಸಿದೆ.
ಆಕ್ಸಿಯಮ್-4 ಮಿಷನ್ ಜೂನ್ 10ರಂದು ನಡೆಯಬೇಕಿತ್ತು, ಆದರೆ ಅದನ್ನು ಜೂನ್ 11ಕ್ಕೆ ಮುಂದೂಡಲಾಗಿತ್ತು. ಈಗ ಹೊಸ ದಿನಾಂಕವನ್ನು ಇನ್ನೂ ನಿಗದಿಪಡಿಸಲಾಗಿಲ್ಲ.
ಈ ಮಿಷನ್ನ್ನು ಅಮೆರಿಕದ ನಾಸಾ ಮತ್ತು ಆಕ್ಸಿಯಮ್ ಸ್ಪೇಸ್ ಸಂಸ್ಥೆ ಜಂಟಿಯಾಗಿ ನಡೆಸುತ್ತಿವೆ. ಇದರಲ್ಲಿರುವ ಗಗನಯಾತ್ರಿಗಳು 14 ದಿನಗಳ ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಾಲಕಳೆಯಲಿದ್ದಾರೆ. ಈ ಯೋಜನೆಗೆ “ಮಿಷನ್ ಆಕಾಶ್ ಗಂಗಾ” ಎಂದು ಹೆಸರು ನೀಡಲಾಗಿದೆ.
ಈ ಮಿಷನ್ಗೆ ಫಾಲ್ಕನ್ 9 ರಾಕೆಟ್ ಬಳಸಲಾಗುತ್ತದೆ. ಗಗನಯಾತ್ರಿಗಳು ಈ ರಾಕೆಟ್ನಿಂದ ಸ್ಪೇಸ್ಎಕ್ಸ್ ಡ್ರ್ಯಾಗನ್ ನೌಕೆಯಲ್ಲಿ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಲಿದ್ದಾರೆ ಎಂದು ನಾಸಾ ಹೇಳಿದೆ.
ಇಸ್ರೋ ಕೂಡ ಈ ಸಂಬಂಧ ಹೇಳಿಕೆ ನೀಡಿ, ತಪಾಸಣೆಯ ವೇಳೆ ಬೂಸ್ಟರ್ನ ಪ್ರೊಪಲ್ಷನ್ ವಿಭಾಗದಲ್ಲಿ ಸೋರಿಕೆ ಕಂಡುಬಂದಿರುವುದಾಗಿ ತಿಳಿಸಿದೆ. ಸೋರಿಕೆ ಸರಿಪಡಿಸಿದ ಬಳಿಕ ಮರು ಪರೀಕ್ಷೆ ನಡೆಸಿ ನಂತರವೇ ಉಡಾವಣೆಗೆ ಅವಕಾಶ ನೀಡಲಾಗುವುದು ಎಂದು ಇಸ್ರೋ ಹೇಳಿದೆ.
ಈ ಮಿಷನ್ ಭಾರತಕ್ಕೆ ಬಹಳ ಮಹತ್ವದ್ದು. ಯಾಕೆಂದರೆ, ಖಾಸಗಿ ಬಾಹ್ಯಾಕಾಶ ಯೋಜನೆಯ ಮೂಲಕ ಭಾರತೀಯನು (ಶುಭಾಂಶು) ಅಂತರರಾಷ್ಟ್ರೀಯ ನಿಲ್ದಾಣ ತಲುಪುತ್ತಿರುವುದು ಇದೇ ಮೊದಲು. ಈ ಹಿಂದೆ ತಾಂತ್ರಿಕ ಕಾರಣಗಳಿಂದ ಈ ಮಿಷನ್ ಹಲವು ಬಾರಿ ಮುಂದೂಡಲಾಗಿತ್ತು.
ಇದು ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಮಹತ್ವದ ಕ್ಷಣ. ಮಿಷನ್ ಯಾವಾಗ ಮರು ನಿಗದಿಯಾಗುತ್ತೆ ಎಂಬ ನಿರೀಕ್ಷೆಯೊಂದಿಗೆ ಎಲ್ಲರೂ ಕಾಯುತ್ತಿದ್ದಾರೆ.
ಮಿಷನ್ ತಂಡ
- ಶುಭಾಂಶು ಶುಕ್ಲಾ (ಪೈಲಟ್ – ಭಾರತ)
- ಡಾ. ಪೆಗ್ಗಿ ವಿಟ್ಸನ್ (ಕಮಾಂಡರ್ – ಅಮೆರಿಕಾ)
- ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ (ಪೋಲೆಂಡ್)
- ಟಿಬೋರ್ ಕಾಪು (ಹಂಗೇರಿ)