New Delhi : ಭಾರತ–ಪಾಕಿಸ್ತಾನ ಗಡಿಯಲ್ಲಿ ಪಂಜಾಬ್ನ ಮೂರು ಪ್ರಮುಖ ಚೆಕ್ಪೋಸ್ಟ್ಗಳಲ್ಲಿ ಸ್ಥಗಿತಗೊಂಡಿದ್ದ ಪ್ರತಿದಿನದ ‘ಬೀಟಿಂಗ್ ರಿಟ್ರೀಟ್’ ಕವಾಯತು ಕಾರ್ಯಕ್ರಮವನ್ನು ಮೇ 21 ರಿಂದ ಸಾರ್ವಜನಿಕರ ವೀಕ್ಷಣೆಗೆ ಮತ್ತೆ ಆರಂಭಿಸಲಾಗುತ್ತಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್ಎಫ್) ತಿಳಿಸಿದೆ.
ಇಂದು (ಮೇ 20, ಮಂಗಳವಾರ)ದಿಂದಲೇ ಕವಾಯತು ಪುನರಾರಂಭವಾಗುತ್ತಿದೆ, ಆದರೆ ಪ್ರಾಥಮಿಕವಾಗಿ ಮಾಧ್ಯಮದವರಿಗೆ ಮಾತ್ರ ಪ್ರವೇಶ ದೊರೆಯಲಿದೆ. ಬುಧವಾರದಿಂದ (ಮೇ 21) ಸಾರ್ವಜನಿಕರಿಗೆ ಕವಾಯತನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗುವುದು. ಪ್ರತಿದಿನ ಸಂಜೆ 6 ಗಂಟೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಪಂಜಾಬ್ನ ಜಲಂಧರ್ ಬಿಎಸ್ಎಫ್ ಕಚೇರಿ ಮಾಹಿತಿ ನೀಡಿದೆ.
ಕವಾಯತಿನ ಸಂದರ್ಭದಲ್ಲಿ ಬಿಎಸ್ಎಫ್ ಪಡೆಗಳು ಪಾಕಿಸ್ತಾನ ರೇಂಜರ್ಗಳೊಂದಿಗೆ ಹಸ್ತಲಾಘವ (ಹ್ಯಾಂಡ್ಶೇಕ್) ಮಾಡುವುದಿಲ್ಲ. ಜೊತೆಗೆ ಧ್ವಜ ಇಳಿಸುವ ಸಂದರ್ಭದಲ್ಲಿ ಗೇಟ್ಗಳನ್ನು ತೆರೆಯುವುದು ಸಹ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಕಳೆದ 12 ದಿನಗಳ ಕಾಲ, ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದ್ದರೂ, ಬಿಎಸ್ಎಫ್ ಪ್ರತಿನಿತ್ಯ ಧ್ವಜ ಇಳಿಸುವ ಕಾರ್ಯಾಚರಣೆ ನಿರಂತರ ನಡೆಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇ 8ರಿಂದ ಭಾರತ–ಪಾಕಿಸ್ತಾನದ ನಡುವಿನ ಗಡಿಭಾಗದ ಪರಿಸ್ಥಿತಿ ತೀವ್ರಗೊಂಡ ಹಿನ್ನೆಲೆ, ಸುರಕ್ಷತಾ ಕ್ರಮವಾಗಿ ಅಮೃತಸರದ ಅಟ್ಟಾರಿ–ವಾಘಾ ಗಡಿ, ಫಿರೋಜ್ಪುರದ ಹುಸೈನಿವಾಲಾ, ಹಾಗೂ ಫಾಜಿಲ್ಕಾ ಜಿಲ್ಲೆಯ ಸಡ್ಕಿ ಚೆಕ್ಪೋಸ್ಟ್ಗಳಲ್ಲಿ ಈ ಕವಾಯತು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಈ ನಿರ್ಧಾರವು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಬಳಿಕ ಮತ್ತಷ್ಟು ಗಮನಸೆಳೆದಿದೆ. ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿರುವುದರಿಂದ ಸಾರ್ವಜನಿಕರಿಗೆ ವೀಕ್ಷಣೆಯ ಅವಕಾಶ ನೀಡಲಾಗುತ್ತಿದೆ.