Devanahalli : ದೇವನಹಳ್ಳಿ ತಾಲ್ಲೂಕಿನಾದ್ಯಂತ ಭಾನುವಾರ ರಾತ್ರಿ ಮತ್ತು ಸೋಮವಾರ ಬೆಳಗಿನ ಜಾವ ಸುರಿದ ಭಾರೀ ಮಳೆಯ ಪರಿಣಾಮವಾಗಿ ಜೀವನಮಟ್ಟದ ಅಸೌಕರ್ಯಗಳು, ಬೆಳೆ ನಷ್ಟ, ಹಾಗೂ ಸಾರ್ವಜನಿಕ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ.
ಅಪರೂಪದ ಮಳೆಯ ತೀವ್ರತೆಗೆ ತಾಲ್ಲೂಕಿನ ಹಲವಾರು ಭಾಗಗಳಲ್ಲಿ ತೋಟಗಾರಿಕೆ ಬೆಳೆಗಳಾದ ಹೂವುಗಳು, ತರಕಾರಿಗಳು ಹಾಗೂ ಇತರ ಕೃಷಿ ಬೆಳೆಗಳು ಹಾನಿಗೀಡಾಗಿವೆ. ಮಳೆಯಿಂದಾಗಿ ಸಾಕಷ್ಟು ತೋಟಗಳಿಗೆ ನೀರು ನುಗ್ಗಿದ್ದು, ಕೃಷಿಕರು ಸಂಕಷ್ಟದಲ್ಲಿದ್ದಾರೆ.
ಕಚ್ಚಾ ಮನೆಗಳಲ್ಲಿ ವಾಸಿಸುತ್ತಿರುವ ಬಡವರು ಹಾಗೂ ನಿರ್ಗತಿಕರು ಭಾನುವಾರ ರಾತ್ರಿ ಸುರಿದ ನಿರಂತರ ಮಳೆಯಿಂದ ರಕ್ಷಣೆ ಪಡೆಯಲು ಪರದಾಡಿದ ದೃಶ್ಯಗಳು ಕಂಡುಬಂದಿವೆ.
ದೇವನಹಳ್ಳಿ ಪಟ್ಟಣದ ಬಿಬಿ ರಸ್ತೆಯಲ್ಲಿ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿಯು ಹಳೇ ಪಟ್ಟಣದ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸಿದಂತೆ ಆಗಿದೆ. ಜಮಾಯಿಸಿರುವ ಮಳೆ ನೀರಿನಿಂದ ಜನರು ಓಡಾಡಲಾಗದ ಸ್ಥಿತಿ ನಿರ್ಮಾಣವಾಗಿದೆ.
ತಾಲ್ಲೂಕು ಕಚೇರಿ ಕಟ್ಟಡದ ನೆಲಮಹಡಿಯಲ್ಲಿ ಮಳೆ ನೀರು ನುಗ್ಗಿದ್ದು, ಪಡಸಾಲೆ ಕಚೇರಿಗೆ ಆಗಮಿಸಿದ ಜನರು ಆಧಾರ್ ನೋಂದಣಿ, ಪ್ರಮಾಣಪತ್ರ ಪಡೆಯುವುದು, ಸಕಾಲ ಅರ್ಜಿ ಸಲ್ಲಿಕೆ ಮುಂತಾದ ಸೇವೆಗಳನ್ನು ಮಳೆ ನೀರಿನಲ್ಲಿ ನಿಂತು ಪಡೆಯುವಂತಾಗಿತ್ತು, ಇದು ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು.
ಸ್ಥಳೀಯ ಸಂಸ್ಥೆಗಳು ಬೇಸಿಗೆ ಕಾಲದಲ್ಲೆ ಚರಂಡಿಗಳ ಸ್ವಚ್ಛತೆಗೆ ವಿಫಲವಾದ ಹಿನ್ನೆಲೆಯು ಇದೀಗ ಬಯಲಾಗಿ ಬಂದಿದೆ. ರಾಜಕಾಲುವೆಗಳ ಮೇಲಿನ ಅನಧಿಕೃತ ಕಟ್ಟಡಗಳು ನೀರಿನ ಹರಿವಿಗೆ ಅಡ್ಡಿಯಾಗಿದ್ದು, ರಸ್ತೆಗಳು ಕೆರೆಯಂತೆ ಬದಲಾಗಿವೆ.
ಪತ್ರಿಕಾ ವಿತರಕರು ಸೋಮವಾರ ಬೆಳಿಗ್ಗೆ ಮಳೆ ಕಾರಣದಿಂದ ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸಲು ವಿಳಂಬ ಅನುಭವಿಸಿದರು. ಇದೇ ರೀತಿ, ಬೀದಿ ಬದಿಯಲ್ಲಿ ವ್ಯಾಪಾರ ನಡೆಸುವ ಹೂವಿನ, ಹಣ್ಣಿನ ಹಾಗೂ ಚಿಲ್ಲರೆ ವ್ಯಾಪಾರಿಗಳು ವ್ಯಾಪಾರವಿಲ್ಲದೇ ನಷ್ಟ ಅನುಭವಿಸಿದ್ದಾರೆ.