Bidar : ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ (BUDA) ಆಯುಕ್ತ ಶ್ರೀಕಾಂತ್ ಚಿಮಕೋಡೆ, ಸದಸ್ಯ ಚಂದ್ರಕಾಂತ್ ರೆಡ್ಡಿ ಮತ್ತು ಆಪ್ತ ಸಿದ್ದು ಹೂಗಾರ 10 ಲಕ್ಷ ರೂಪಾಯಿ ಲಂಚ (Bribe) ಪಡೆಯುವಾಗ ಲೋಕಾಯುಕ್ತ ಪೊಲೀಸರ (Lokayukta Police) ದಾಳಿಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿದ್ದಾರೆ.
ಕೃಷಿಯೇತರ ಜಮೀನಿನ (ಎನ್.ಎ) ನಿವೇಶನಗಳ ಮಾರಾಟ ಅನುಮತಿಗಾಗಿ 50 ಲಕ್ಷ ಲಂಚ ಕೇಳಿದ್ದು, ಮೊದಲ ಕಂತು 10 ಲಕ್ಷ ರೂಪಾಯಿ ಸ್ವೀಕರಿಸುವ ಸಮಯದಲ್ಲಿ ಬಲೆಗೆ ಬಿದ್ದಿದ್ದಾರೆ. ಬೀದರ್ನ ಚಿಕ್ಕಪೇಟೆಯ ಸರ್ವೇ ನಂಬರ್ 26ರ ಕೃಷಿಯೇತರ ಜಮೀನಿನ ಶೇ. 60ರಷ್ಟು ನಿವೇಶನ ಬಿಡುಗಡೆಗೆ ಮತ್ತು ಮಾರಾಟ ಅನುಮತಿಗೆ ಈ ಲಂಚದ ಬೇಡಿಕೆ ಇಟ್ಟಿದ್ದರು.
ರಿಯಲ್ ಎಸ್ಟೇಟ್ ಉದ್ಯಮಿ ಸತೀಶ್ ನೌಬಾದೆ ಅವರು ಈ ಸಂಬಂಧ ಲೋಕಾಯುಕ್ತರಿಗೆ ದೂರು ನೀಡಿದ್ದು, ಅದರ ಮೇರೆಗೆ ಇಂದು ಲೋಕಾಯುಕ್ತ ಎಸ್ಪಿ ಉಮೇಶ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ಶ್ರೀಕಾಂತ್ ಚಿಮಕೋಡೆ, ಬಿಜೆಪಿ ಮುಖಂಡ ಮತ್ತು ಗುತ್ತಿಗೆದಾರ ಗುರುನಾಥ್ ಕೊಳ್ಳೂರು ಅವರ ಅಳಿಯರಾಗಿದ್ದಾರೆ. ಇದರಿಂದ ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ.