Bengaluru: ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ 30 ವರ್ಷದ ಹಿಂದಿನ ಮೇವು ಹಗರಣ ಮತ್ತೆ ಪ್ರಸ್ತಾಪಕ್ಕೆ ಬಂದಿದೆ. ಬಿಹಾರ ಸರ್ಕಾರವು (Bihar government) ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರಿಂದ ಹಗರಣಕ್ಕೆ ಸಂಬಂಧಿಸಿದ ನಷ್ಟವನ್ನು ವಸೂಲಿ ಮಾಡಲು ನ್ಯಾಯಾಲಯಕ್ಕೆ ಹೋಗಲು ಸಿದ್ಧತೆ ನಡೆಸಿದೆ.
ಸರ್ಕಾರಿ ಖಜಾನೆಗೆ 950 ಕೋಟಿ ರೂ. ಮರಳಿಸಲು ಬಿಹಾರ ಸರ್ಕಾರ ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯೊಂದಿಗೆ ಸಮಾಲೋಚನೆ ನಡೆಸುತ್ತಿದೆ. ಲಾಲು ಯಾದವ್ ಈಗಾಗಲೇ 5 ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದಾರೆ.
1996ರಲ್ಲಿ ಚೈಬಾಸಾ ಉಪ ಆಯುಕ್ತ ಅಮಿತ್ ಖರೆ ಅವರು ಪಶುಸಂಗೋಪನಾ ಇಲಾಖೆಯ ಮೇಲೆ ದಾಳಿ ನಡೆಸಿದಾಗ ಈ ಹಗರಣ ಬೆಳಕಿಗೆ ಬಂದಿತು. ಸರ್ಕಾರಿ ಖಜಾನೆಯಿಂದ ನಕಲಿ ಬಿಲ್ಲುಗಳ ಮೂಲಕ ಕೋಟ್ಯಾಂತರ ರೂಪಾಯಿ ಲೂಟಿ ಮಾಡಲಾಗಿದೆ.
ಈ ಹಗರಣದಲ್ಲಿ ಲಾಲು ಯಾದವ್ ಸೇರಿದಂತೆ ಹಲವು ರಾಜಕೀಯ ನಾಯಕರು, ಅಧಿಕಾರಿಗಳು ಮತ್ತು ಪೂರೈಕೆದಾರರು ಭಾಗಿಯಾಗಿದ್ದರು. 66 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 5 ಪ್ರಕರಣಗಳಲ್ಲಿ ಲಾಲು ಯಾದವ್ ಅಪರಾಧಿಯಾಗಿ ತೀರ್ಪು ಪಡೆದಿದ್ದಾರೆ.
ಲಾಲು ಯಾದವ್ ಈ ಹಗರಣದ ಕಾರಣ 7 ಬಾರಿ ಜೈಲಿಗೆ ಹೋಗಿದ್ದಾರೆ. 2013ರಲ್ಲಿ ಮೊದಲ ಬಾರಿಗೆ ಬಂಧನಕ್ಕೊಳಗಾದ ಅವರು 3 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದರು. ಪ್ರಸ್ತುತ, ಅನಾರೋಗ್ಯದ ಕಾರಣ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.
ಬಿಹಾರ ಸರ್ಕಾರ ನ್ಯಾಯಾಲಯದಲ್ಲಿ ತನ್ನ ಹಕ್ಕನ್ನು ಮಂಡಿಸಿ, ಲಾಲು ಯಾದವ್ ಸೇರಿ ಇತರ ಆರೋಪಿಗಳಿಂದ ಹಣ ವಸೂಲಿ ಮಾಡಲು ನಿರ್ಧರಿಸಿದೆ. ನ್ಯಾಯಾಲಯ ಆದೇಶ ನೀಡಿದರೆ, ಲಾಲು ಯಾದವ್ 304 ಕೋಟಿ ರೂ. ಪಾವತಿಸಬೇಕಾಗುತ್ತದೆ.