
Kolkata: “ಸನಾತನ ಧರ್ಮ ಕೆಟ್ಟ ಧರ್ಮವೇ?” ಎಂದು ಬಿಜೆಪಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು (Mamata Banerjee) ತರಾಟೆಗೆ ತೆಗೆದುಕೊಂಡಿದೆ. ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು, “ಮಮತಾ ಬ್ಯಾನರ್ಜಿಯವರಿಗೆ ಸನಾತನ ಧರ್ಮ ಕೊಳಕು ಧರ್ಮವೇ?” ಎಂದು ಪ್ರಶ್ನಿಸಿದ್ದಾರೆ.
ಅವರು ತಮ್ಮ ಆಡಳಿತಾವಧಿಯಲ್ಲಿ ಅನೇಕ ಹಿಂದೂ ವಿರೋಧಿ ಗಲಭೆಗಳನ್ನು ನಿಭಾಯಿಸಿಲ್ಲ ಎಂದು ಬಿಜೆಪಿ ಆರೋಪಿಸಿದೆ. ಸುಭೇಂದು ಅಧಿಕಾರಿ ಮಾತನಾಡಿ, “ಮುಸ್ಲಿಂ ಸಮುದಾಯವನ್ನು ಮೆಚ್ಚಿಸಲು ನೀವು ‘ಕೊಳಕು ಧರ್ಮ’ವನ್ನು ಅನುಸರಿಸುವುದಿಲ್ಲ ಎಂದು ಹೇಳಿದ್ದೀರಿ. ನೀವು ಯಾವ ಧರ್ಮವನ್ನು ಉದ್ದೇಶಿಸಿದ್ದೀರಿ? ಸನಾತನ ಹಿಂದೂ ಧರ್ಮವೇ?” ಎಂದು ಪ್ರಶ್ನಿಸಿದರು.
ಮಮತಾ ಬ್ಯಾನರ್ಜಿಯವರು, “ನಾನು ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರು ಅನುಸರಿಸಿದ ಧರ್ಮವನ್ನು ಅನುಸರಿಸುತ್ತೇನೆ. ಆದರೆ ಬಿಜೆಪಿಯಂತಹ ಕೆಟ್ಟ ಧರ್ಮವನ್ನು ಅನುಸರಿಸುವುದಿಲ್ಲ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.
“ಗಲಭೆಗಳನ್ನು ಪ್ರಚೋದಿಸಲು ಪ್ರಯತ್ನಗಳು ನಡೆಯುತ್ತಿವೆ, ದಯವಿಟ್ಟು ಈ ಬಲೆಗಳಲ್ಲಿ ಬೀಳಬೇಡಿ” ಎಂದು ಮಮತಾ ಜನತೆಗೆ ಮನವಿ ಮಾಡಿದ್ದಾರೆ. ಯಾವುದೇ ಧರ್ಮವು ದ್ವೇಷವನ್ನು ಬೋಧಿಸುವುದಿಲ್ಲ, ಆದರೆ ಕೆಲವು ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ ದ್ವೇಷವನ್ನು ಹರಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.