Dehradun (Uttarakhand): ಉತ್ತರಾಖಂಡದಲ್ಲಿ ಭಾರೀ ಮಳೆ ಮತ್ತು ಭೂಕುಸಿತದ ಕಾರಣದಿಂದಾಗಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದ ಚಾರ್ಧಾಮ್ ಯಾತ್ರೆ (Chardham Yatra) ಇಂದಿನಿಂದ (ಜೂನ್ 30) ಪುನಾರಂಭಗೊಂಡಿದೆ ಎಂದು ಗರ್ವಾಲ್ ವಿಭಾಗದ ಆಯುಕ್ತರು ತಿಳಿಸಿದ್ದಾರೆ.
ಜೂನ್ 29ರಂದು ಯಾತ್ರೆಗೆ ನಿಷೇಧ ವಿಧಿಸಲಾಗಿತ್ತು. ಕೇವಲ 24 ಗಂಟೆಗಳ ಒಳಗೆಯೇ ಈ ನಿಷೇಧ ಹಿಂತೆಗೆದುಕೊಳ್ಳಲಾಗಿದೆ. ಆದರೆ, ಭಾರೀ ಮಳೆಯ ಮುನ್ಸೂಚನೆಯ ಹಿನ್ನೆಲೆ ಭಾರತೀಯ ಹವಾಮಾನ ಇಲಾಖೆ ರಾಜ್ಯಕ್ಕೆ ರೆಡ್ ಅಲರ್ಟ್ ಘೋಷಿಸಿದೆ.
ರೆಡ್ ಅಲರ್ಟ್ ಹಿನ್ನೆಲೆ, 1 ರಿಂದ 12ನೇ ತರಗತಿಯವರೆಗಿನ ಎಲ್ಲಾ ಶಾಲೆಗಳು ಮತ್ತು ಅಂಗನವಾಡಿಗಳಿಗೆ ಇಂದು ಒಂದು ದಿನ ರಜೆ ಘೋಷಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ಕಾರ್ಯದರ್ಶಿ ವಿನೋದ್ ಕುಮಾರ್ ಸುಮನ್ ಅವರು ತಿಳಿಸಿದ್ದಾರೆ.
ಹವಾಮಾನ ಇಲಾಖೆ ಪ್ರಕಾರ 7 ರಿಂದ 20 ಸೆಂ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ, ಭಕ್ತರು ತಮ್ಮ ಜಿಲ್ಲೆಗಳಿಂದ ಪ್ರಯಾಣ ಆರಂಭಿಸುವ ಮೊದಲು ಸ್ಥಳೀಯ ಹವಾಮಾನದ ಆಧಾರವಾಗಿ ನಿರ್ಧಾರ ತೆಗೆದುಕೊಳ್ಳಬೇಕೆಂದು ಗರ್ವಾಲ್ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಹವಾಮಾನ ಅನೂಕೂಲವಾಗದಿದ್ದರೆ ಯಾತ್ರೆಯನ್ನು ಮತ್ತೆ ನಿಲ್ಲಿಸಬಹುದಾಗಿದೆ. ಹಾಗೆಯೇ, ಭಕ್ತರು ಸುರಕ್ಷಿತ ಸ್ಥಳಗಳಲ್ಲಿ ತಂಗಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಆಯುಕ್ತ ವಿನಯ್ ಶಂಕರ್ ಪಾಂಡೆ ಅವರು ಆದೇಶಿಸಿದ್ದಾರೆ.
ಯಾತ್ರಾ ಮಾರ್ಗದ ಪ್ರಮುಖ ಧಾಮಗಳು
- ಯಮುನೋತ್ರಿ ಮತ್ತು ಗಂಗೋತ್ರಿ ದೇವಾಲಯಗಳು – ಉತ್ತರಕಾಶಿ ಜಿಲ್ಲೆ
- ಕೇದಾರನಾಥ ಧಾಮ್ – ರುದ್ರಪ್ರಯಾಗ ಜಿಲ್ಲೆ
- ಬದ್ರಿನಾಥ ಧಾಮ್ – ಚಮೋಲಿ ಜಿಲ್ಲೆ
ಯಾತ್ರೆಗೆ ಹೊರಡುವ ಮುನ್ನ ಹವಾಮಾನ ಸ್ಥಿತಿಯನ್ನು ಪರಿಶೀಲಿಸಿ, ಸ್ಥಳೀಯ ಆಡಳಿತದ ಸೂಚನೆಗಳನ್ನು ಪಾಲಿಸಬೇಕು.