
Chikkaballapur : “ಆಸೆಯೇ ದುಃಖಕ್ಕೆ ಮೂಲ ಎಂಬ ಭಗವಾನ್ ಬುದ್ಧರ ಸಂದೇಶವು ಇಂದಿಗೂ ಮಾನವನ ಜೀವನದಲ್ಲಿ ಅಗಾಧ ಅರ್ಥವನ್ನು ಹೊಂದಿದೆ,” ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.
ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಭಗವಾನ್ ಬುದ್ಧ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಗವಾನ್ ಬುದ್ಧರು ರಾಜವಂಶದಲ್ಲಿ ಜನಿಸಿದರೂ ಭೌತಿಕ ಸುಖವನ್ನೆಲ್ಲಾ ತ್ಯಜಿಸಿ ಸತ್ಯಾನ್ವೇಷಣೆಗೆ ನಡಿಗೆಹಾಕಿದ ಮಹಾನ್ ತತ್ತ್ವಜ್ಞರು ಎಂದರು.
“ಬುದ್ಧರು ಮಾನವನ ದುಃಖ ನಿವಾರಣೆಗೆ ಸೂಕ್ತ ಮಾರ್ಗದರ್ಶನ ನೀಡಿದರು. ಅವರ ತತ್ತ್ವಗಳು ಆಧ್ಯಾತ್ಮಿಕ ಶಾಂತಿಗೆ ಮಾತ್ರವಲ್ಲ, ಸಾಮಾಜಿಕ ಸಮತೆಯತ್ತಕ್ಕೂ ಮಾರ್ಗದರ್ಶಕವಾಗಿವೆ. ಅಗತ್ಯಕ್ಕಿಂತ ಹೆಚ್ಚಿನದನ್ನು ಬಯಸದೆ, ನಿರೀಕ್ಷೆಗಳನ್ನೂ ನಿಯಂತ್ರಿಸುವ ಮೂಲಕ ಜೀವನದ ದುಃಖವನ್ನು ದೂರ ಮಾಡಬಹುದು ಎಂಬ ಬೋಧನೆ ಇಂದಿಗೂ ಪ್ರಸ್ತುತ,” ಎಂದು ಅವರು ಹೇಳಿದರು.
ಬೌದ್ಧ ಧರ್ಮವನ್ನು ಸ್ವೀಕರಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರು ‘ಬುದ್ಧಂ ಶರಣಂ ಗಚ್ಛಾಮಿ’ ಎಂಬ ಘೋಷಣೆಯೊಂದಿಗೆ ಬುದ್ಧರ ದಾರಿಯೇ ಜೀವನ ಸಾರ್ಥಕತೆಗೆ ದಾರಿ ಎಂದು ಸಾರಿದರು ಎಂದು ಅವರು ಸ್ಮರಿಸಿದರು.
ಧಮ್ಮಾಚಾರಿ ಎಚ್.ಆರ್. ಸುರೇಂದ್ರ ಮಾತನಾಡಿ, ಬುದ್ಧ ಧರ್ಮದ ಸಾರ್ಥಕತೆಯನ್ನು ತಿಳಿಸಲು ಜಿಲ್ಲೆಯಲ್ಲಿ ಬುದ್ಧ ವಿಹಾರ ನಿರ್ಮಾಣದ ಅಗತ್ಯವಿದೆ ಎಂದು ಮನವಿ ಮಾಡಿದರು. ಬಿಕ್ಕು ಸಾರಿಪುತ್ರ ಭಂತೀಜಿ ಸ್ವಾಮೀಜಿ ಅವರು ತ್ರಿಶರಣ, ಪಂಚಶೀಲ ತತ್ವಗಳ ಬಗ್ಗೆ ಉಪದೇಶ ನೀಡಿದರು.
ಕಾರ್ಯಕ್ರಮದಲ್ಲಿ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಯಲುವಹಳ್ಳಿ ರಮೇಶ್, ನಗರಸಭೆ ಉಪಾಧ್ಯಕ್ಷ ನಾಗರಾಜ್, ಸದಸ್ಯೆ ಅಣ್ಣಮ್ಮ, ಉಪ ನಿರ್ದೇಶಕ ತೇಜಾನಂದ ರೆಡ್ಡಿ, ಸಾರಿಗೆ ಅಧಿಕಾರಿ ವಿವೇಕಾನಂದ, ಡಿವೈಎಸ್ಪಿ ಶಿವಕುಮಾರ್ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.
For Daily Updates WhatsApp ‘HI’ to 7406303366
The post ಭಗವಾನ್ ಬುದ್ಧ ಜಯಂತಿಯಲ್ಲಿ ಜಿಲ್ಲಾಧಿಕಾರಿಗಳ ಸಂದೇಶ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.