
Chikkaballapur : ದೇಶದ ಯುವಶಕ್ತಿಯ ತಂತ್ರಜ್ಞಾನ ಕೌಶಲ್ಯ ಮತ್ತು ಆವಿಷ್ಕಾರದ ಸಾಮರ್ಥ್ಯವನ್ನು ಪ್ರದರ್ಶಿಸಲು ವಿನ್ಯಾಸಗೊಳಿಸಲಾದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ (SIH) – 2025 ಕಾರ್ಯಕ್ರಮವು ತಾಲ್ಲೂಕಿನ ನಾಗಾರ್ಜುನ ಎಂಜಿನಿಯರಿಂಗ್ ಮತ್ತು ತಾಂತ್ರಿಕ ವಿದ್ಯಾಲಯದಲ್ಲಿ ಅದ್ಧೂರಿಯಾಗಿ ಉದ್ಘಾಟನೆಗೊಂಡಿತು.
ತಂತ್ರಜ್ಞಾನ ಕೌಶಲ್ಯ ಪ್ರದರ್ಶನಕ್ಕೆ ರಾಷ್ಟ್ರಮಟ್ಟದ ವೇದಿಕೆ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಾಗಾರ್ಜುನ ಎಂಜಿನಿಯರಿಂಗ್ ಮತ್ತು ತಾಂತ್ರಿಕ ವಿದ್ಯಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾನು ಚೈತನ್ಯ ವರ್ಮಾ, “ನಮ್ಮ ದೇಶದ ಯುವಶಕ್ತಿಗೆ ರಾಷ್ಟ್ರಮಟ್ಟದ ಅವಕಾಶ ದೊರೆತಿರುವುದು ಶ್ಲಾಘನೀಯ. ಪ್ರತಿಯೊಬ್ಬ ಸ್ಪರ್ಧಾರ್ಥಿಯೂ ತಮ್ಮಲ್ಲಿರುವ ಪ್ರಾಯೋಗಿಕ ಮತ್ತು ತಂತ್ರಜ್ಞಾನ ಕೌಶಲವನ್ನು ಜಗತ್ತಿನ ಮುಂದೆ ಪ್ರದರ್ಶಿಸಬೇಕು” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ದೇಶದಾದ್ಯಂತ ಲಕ್ಷಾಂತರ ಯುವಜನರು ಭಾಗವಹಿಸುತ್ತಿದ್ದಾರೆ. ನಾಗಾರ್ಜುನ ಸಂಸ್ಥೆಗೆ ದೇಶದ 11 ರಾಜ್ಯಗಳಿಂದ 120 ವಿದ್ಯಾರ್ಥಿಗಳು ಬಂದಿದ್ದಾರೆ ಎಂದು ತಿಳಿಸಿದ ಅವರು, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇದೊಂದು ಸದಾವಕಾಶವಾಗಿದ್ದು, ಎಲ್ಲರೂ ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಶಿಕ್ಷಣ ಸಚಿವಾಲಯ ಮತ್ತು ಎಐಸಿಟಿಇಗೆ ಧನ್ಯವಾದ ಅರ್ಪಿಸಿದರು.
ಸಮಸ್ಯೆಗಳ ಪರಿಹಾರಕ್ಕೆ ಒಗ್ಗಟ್ಟಿನ ಮಂತ್ರ
ನವದೆಹಲಿ ಡಿಆರ್ಡಿಒ (DRDO) ಮುಖ್ಯಕಚೇರಿ ನಿರ್ದೇಶಕ ಎನ್.ರಂಜನ ಮಾತನಾಡಿ, “SIH-2025 ನಮ್ಮ ದೇಶದ ರಕ್ಷಣೆಗಾಗಿ ನಡೆಯುತ್ತಿರುವ ಕಾರ್ಯಕ್ರಮ. ಯಾವುದೇ ಸಮಸ್ಯೆಯನ್ನು ಒಂದೇ ದೃಷ್ಟಿಕೋನದಿಂದ ಬಗೆಹರಿಸಲು ಸಾಧ್ಯವಿಲ್ಲ. ಬಹುಶಿಸ್ತೀಯ ಆಯಾಮಗಳಿಂದ ಪ್ರಯತ್ನಿಸಿದಾಗ ಮಾತ್ರ ಪರಿಹಾರ ಸಾಧ್ಯವಾಗುತ್ತದೆ” ಎಂದು ಹೇಳಿದರು.
ಒಗ್ಗಟ್ಟಿನ ಕೆಲಸದ ಮಹತ್ವ: ಕೆಲವರು ಕೋಡಿಂಗ್ನಲ್ಲಿ, ಇನ್ನು ಕೆಲವರು ಬೇರೆ ತಂತ್ರಜ್ಞಾನದಲ್ಲಿ ಪ್ರಾವೀಣ್ಯ ಹೊಂದಿರುತ್ತಾರೆ. ಆದ್ದರಿಂದ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಮಾತ್ರ ಸಮಸ್ಯೆ ಬಗೆಹರಿಯುತ್ತದೆ. ನಿಮ್ಮ ತಂಡದ ಪರಿಹಾರವು ಪರಿಪೂರ್ಣವಾಗಿದ್ದರೆ, ಅದನ್ನು ಮುಂದಿನ ದಿನಗಳಲ್ಲಿ ಕಂಪನಿಗಳಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.
ವಾಲ್ಮಾರ್ಟ್ ಇಂಡಿಯಾ ಲಿಮಿಟೆಡ್ನ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ರಾಧಾಕೃಷ್ಣನ್ ಹಾಗೂ ಟಿಸಿಎಸ್ ಕಂಪನಿಯ ವಿಜ್ಞಾನಿ ರಾಜನ್ ಎಂ.ಎ ಮಾತನಾಡಿ, ಯುವಜನರು ತಮ್ಮ ಆವಿಷ್ಕಾರ ಶಕ್ತಿಯನ್ನು ಪ್ರದರ್ಶಿಸಲು ಒಗ್ಗಟ್ಟಾಗಬೇಕು. ಜ್ಞಾನಕ್ಕೆ ಸಮನಾದ ಶಕ್ತಿ ಮತ್ತೊಂದಿಲ್ಲ, ನಿರಂತರ ಚುರುಕುತನದಿಂದ ಸಾಧನೆಗಳನ್ನು ಮಾಡಬಹುದು ಎಂದು ಪ್ರೇರೇಪಿಸಿದರು.
For Daily Updates WhatsApp ‘HI’ to 7406303366
The post ನಾಗಾರ್ಜುನ ಕಾಲೇಜಿನಲ್ಲಿ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ – 2025 appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.







