

Chikkaballapur : ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಕಾಲ (sakala) ಅಧಿನಿಯಮದ ಅಡಿಯಲ್ಲಿ ನಿಗದಿತ ಸಮಯದಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡದಿದ್ದಲ್ಲಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಎಚ್ಚರಿಸಿದ್ದಾರೆ.
ಸಕಾಲದ ಆನ್ಲೈನ್ ವರದಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಅವಧಿ ಮೀರಿ ಬಾಕಿ ಉಳಿದ ಮನವಿಗಳ ಪಟ್ಟಿ ಸಿದ್ಧಗೊಳಿಸಿ ಸಂಬಂಧಿತ ನಗರ ಸ್ಥಳೀಯ ಸಂಸ್ಥೆಗಳಿಗೆ ರವಾನಿಸಿದ್ದಾರೆ. ಪಟ್ಟಿಯಲ್ಲಿ ಅರ್ಜಿದಾರರ ವಿವರಗಳು ಮತ್ತು ಅವರು ಸಲ್ಲಿಸಿದ ಸೇವೆಗಳ ಮಾಹಿತಿ ಉಲ್ಲೇಖಿಸಲಾಗಿದೆ. ಅರ್ಜಿಗಳನ್ನು ನಿಯಮದ ಅನುಸಾರ ಪರಿಶೀಲಿಸಿ ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡಬೇಕೆಂದು ಪೌರಾಯುಕ್ತರಿಗೆ ಅವರು ಕಡ್ಡಾಯವಾಗಿ ಸೂಚಿಸಿದ್ದಾರೆ.
ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಸಕಾಲ, ಐಪಿಜಿಆರ್ಎಸ್, ಸಿಪಿಜಿಆರ್ಎಎಂಎಸ್, ಮತ್ತು ಸಿಎಂಜೆಎಸ್–2 ತಂತ್ರಾಂಶಗಳಲ್ಲಿ ಸ್ವೀಕೃತಗೊಂಡ ಮನವಿಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಈ ಹಿಂದೆ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಸೂಚಿಸಲಾಗಿತ್ತು. ಆದಾಗ್ಯೂ, ಇನ್ನೂ ಕೆಲವು ಮನವಿಗಳು ಬಾಕಿ ಉಳಿಯುತ್ತಿರುವುದು ಗಮನಕ್ಕೆ ಬಂದಿದ್ದು, ಇದರಿಂದ ಮೇಲಧಿಕಾರಿಗಳ ಸಭೆಗಳಲ್ಲಿ ಸ್ಪಷ್ಟನೆ ನೀಡುವುದು ಕಷ್ಟಕರವಾಗಿದೆ ಎಂದು ಅವರು ಚಿಂತೆ ವ್ಯಕ್ತಪಡಿಸಿದರು.
ತಡೆರಹಿತ ಕಾರ್ಯವಿಧಾನಕ್ಕಾಗಿ ಸೂಕ್ತ ಕ್ರಮ
ನಿಗದಿತ ಅವಧಿಯೊಳಗೆ ಮನವಿಗಳನ್ನು ವಿಲೇವಾರಿ ಮಾಡದ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಕಾಲ ಅವಧಿ ಮೀರಿ ಬಾಕಿ ಇರುವ ದಿನಗಳಿಗನುಸಾರ ದಂಡ ವಿಧಿಸಲಾಗುವುದು, ಮತ್ತು ಶಿಸ್ತು ಕ್ರಮ ಜರುಗಿಸಲು ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.
ವೇತನ ಕಟಾವಿನ ಎಚ್ಚರಿಕೆ
ಅವಧಿ ಮೀರಿ ಬಾಕಿ ಉಳಿದ ಅರ್ಜಿಗಳನ್ನು ಯಾರ ಲಾಗಿನ್ನಲ್ಲಿ ತಡೆದು ಇಟ್ಟಿದ್ದಾರೋ ಅದನ್ನು ಪರಿಶೀಲಿಸಲಾಗುವುದು. ದಂಡವನ್ನು ಲೆಕ್ಕಹಾಕಿ ಸಂಬಂಧಿತ ಅಧಿಕಾರಿಗಳ ಅಥವಾ ನೌಕರರ ವೇತನವನ್ನು ಕಡಿತಗೊಳಿಸಲಾಗುವುದು. ಇನ್ನು ಮುಂದೆ ಸಕಾಲದ ಪ್ರಕ್ರಿಯೆಗಳಲ್ಲಿ ವಿಳಂಬ ತಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಿ.ಎನ್. ರವೀಂದ್ರ ತಿಳಿಸಿದ್ದಾರೆ.
For Daily Updates WhatsApp ‘HI’ to 7406303366
The post ಅರ್ಜಿ ವಿಲೇವಾರಿ ವಿಳಂಬಕ್ಕೆ ಶಿಸ್ತು ಕ್ರಮ: ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯ ಎಚ್ಚರಿಕೆ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.