
ಹಿಮಾಚಲ (Himachal) ಪ್ರದೇಶದ ಕಂಗ್ರಾ ಮತ್ತು ಕುಲು ಜಿಲ್ಲೆಗಳಲ್ಲಿ ಬುಧವಾರ ಭಾರಿ ಮಳೆ ಹಾಗೂ ಮೇಘಸ್ಪೋಟ (Cloudburst) ಸಂಭವಿಸಿದೆ. ಈ ಪರಿಣಾಮದಿಂದ ದಿಢೀರ್ ಪ್ರವಾಹ ಉಂಟಾಗಿ, ಸುಮಾರು 10 ಕಾರ್ಮಿಕರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಇಬ್ಬರು ಸಾವನ್ನಪ್ಪಿದ್ದು, 20 ಮಂದಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ರಕ್ಷಣಾ ತಂಡಗಳು ಈ ನಾಪತ್ತೆಯಾದವರ ಶೋಧ ಕಾರ್ಯದಲ್ಲಿ ತೊಡಗಿವೆ.
ಕಂಗ್ರಾ ಜಿಲ್ಲೆಯ ಖಾನಿಯಾರಾದ ಮನುನಿ ಖಾದ್ನಲ್ಲಿ ನೀರಿನ ಮಟ್ಟ ಹೆಚ್ಚಾದ ಕಾರಣ, ಇಂದಿರಾ ಪ್ರಿಯದರ್ಶಿನಿ ಜಲವಿದ್ಯುತ್ ಯೋಜನೆ ಬಳಿ ಇರುವ ಕಾರ್ಮಿಕ ಕಾಲೋನಿಯಲ್ಲಿ 15ರಿಂದ 20 ಮಂದಿ ಕಾರ್ಮಿಕರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಶಂಕೆ ಇದೆ.
ಕುಲು ಜಿಲ್ಲೆಯ ರೆಹ್ಲಾ ಬಿಹಲ್ ನಲ್ಲಿ ನೀರಿನ ಮಟ್ಟ ಏರಿ, ಮನೆಯಲ್ಲಿದ್ದ ಕಿಮತೆಯ ವಸ್ತುಗಳನ್ನು ತೆಗೆದುಕೊಳ್ಳಲು ಮನೆಗೆ ಹೋದ ಕೆಲವರು ಕಣ್ಮರೆಯಾಗಿದ್ದಾರೆ.
ಸ್ಥಳದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ತಂಡದ ಎರಡು ತಂಡಗಳು ಮತ್ತು ಹೋಮ್ ಗಾರ್ಡ್ಸ್ನ ಒಂದು ತಂಡ ಕಾರ್ಯನಿರ್ವಹಿಸುತ್ತಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವನ್ನು ಸಹ ಕರೆಯಲಾಗಿದೆ ಎಂದು ಉಪ ಆಯುಕ್ತ ಹೇಮರಾಜ್ ಬೈರ್ವಾ ತಿಳಿಸಿದ್ದಾರೆ.
ಪ್ರವಾಹದ ಹೊತ್ತಿನಲ್ಲಿ ಆರು ಜನರು ಜಲವಿದ್ಯುತ್ ಯೋಜನೆಯ ಬಳಿ ಸಿಲುಕಿರುವ ಶಂಕೆ ಇದೆ. ಒಬ್ಬ ವ್ಯಕ್ತಿ ಬೆಟ್ಟದ ಕಡೆ ಓಡಿದ್ದು, ಅವನ ಬಗ್ಗೆ ಇನ್ನೂ ಮಾಹಿತಿ ಲಭ್ಯವಿಲ್ಲ. ಇತರರನ್ನು ರಕ್ಷಿಸಲಾಗಿದೆ. ನಾಪತ್ತೆಯಾದವರು ನುರ್ಪುರ್, ಚಂಬಾ ಹಾಗೂ ಉತ್ತರ ಪ್ರದೇಶದಿಂದ ಬಂದವರು ಎಂದು ತಿಳಿದುಬಂದಿದೆ.