ಪಾಕಿಸ್ತಾನ ಪ್ರಶ್ನಿಸಿದ “ಚೀನಾ ಬ್ರಹ್ಮಪುತ್ರ ನದಿ ನೀರನ್ನು ನಿಲ್ಲಿಸಿದರೆ ಏನು ಆಗುತ್ತದೆ?” ಎಂಬುದಕ್ಕೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (CM Himanta Biswa Sharma) ಉತ್ತರ ನೀಡಿದ್ದಾರೆ.
ಭಾರತವು ಸಿಂಧೂ ಜಲ ಒಪ್ಪಂದವನ್ನು ಅಮಾನತು ಮಾಡಿದ ಬಳಿಕ ಪಾಕಿಸ್ತಾನ ಈ ರೀತಿಯ ಸುಳ್ಳು ಬೆದರಿಕೆ ಹಾಕುತ್ತಿದೆ ಎಂದು ಸಿಎಂ ಶರ್ಮಾ ಹೇಳಿದ್ದಾರೆ.
ಬ್ರಹ್ಮಪುತ್ರ ನದಿ ಟಿಬೇಟಿನಲ್ಲಿ (ಚೀನಾದ ನಿಯಂತ್ರಣ) ಹುಟ್ಟುತ್ತದೆ. ಆದರೆ ಈ ನದಿಯ ಹರಿವಿನ ಸುಮಾರು 30-35% ನೀರು ಮಾತ್ರ ಚೀನಾದಿಂದ ಬರುತ್ತದೆ. ಉಳಿದ 65-70% ನೀರು ಭಾರತದಲ್ಲಿ, ವಿಶೇಷವಾಗಿ ಅರುಣಾಚಲ, ಅಸ್ಸಾಂ, ನಾಗಾಲ್ಯಾಂಡ್, ಮೇಘಾಲಯಗಳಲ್ಲಿ ಮಳೆಯಿಂದ ಬರುತ್ತದೆ.
ಬ್ರಹ್ಮಪುತ್ರ ನದಿ ಮುಖ್ಯವಾಗಿ ಮಳೆಯ ಆಶ್ರಿತ ನದಿ. ಭಾರತದ ಭಾಗದಲ್ಲಿ ಸುರಿಯುವ ಮಳೆಯೇ ನದಿ ಹರಿವಿಗೆ ಪ್ರಮುಖ ಕಾರಣ.
ಚೀನಾ ನೀರಿನ ಹರಿವನ್ನು ಕಡಿಮೆ ಮಾಡಿದರೆ ಅಸ್ಸಾಂನಲ್ಲಿ ಪ್ರವಾಹ ಕಡಿಮೆಯಾಗಬಹುದು. ಇದರಿಂದಾಗಿ ಪ್ರತಿ ವರ್ಷ ಪ್ರವಾಹದಿಂದಾಗಿ ತೊಂದರೆ ಪಡುವ ಜನರಿಗೆ ಸಹಾಯವಾಗುತ್ತದೆ ಎಂದು ಸಿಎಂ ಹೇಳಿದರು.
74 ವರ್ಷಗಳಿಂದ ಪಾಕಿಸ್ತಾನ ಸಿಂಧೂ ಜಲ ಒಪ್ಪಂದವನ್ನು ದುರ್ಬಳಕೆ ಮಾಡಿದ್ದು, ಭಾರತ ತನ್ನ ಹಕ್ಕುಗಳನ್ನು ಮರಳಿ ಪಡೆಯುತ್ತಿದ್ದಂತೆ ಪಾಕಿಸ್ತಾನ ಭಯಗೊಂಡಿದೆ.
ಬ್ರಹ್ಮಪುತ್ರ ನದಿ ಒಬ್ಬರ ನಿಯಂತ್ರಣದಲ್ಲಿ ಇರಲು ಸಾಧ್ಯವಿಲ್ಲ. ಇದು ಭೌಗೋಳಿಕ, ಮಾನ್ಸೂನ್ ಮತ್ತು ಭಾರತೀಯ ನದಿ ವ್ಯವಸ್ಥೆಯ ಅವಿಭಾಜ್ಯ ಭಾಗ ಎಂದು ಮುಖ್ಯಮಂತ್ರಿ ತಿಳಿಸಿದರು.