ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ (H D Kumaraswamy)ಹಾಗೂ JDS ನ MLC ರಮೇಶ್ ಗೌಡ (Ramesh Gowda) ವಿರುದ್ಧ ಉದ್ಯಮಿ ವಿಜಯ್ ಟಾಟಾ (Vijay Tata) ಅವರು ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮಗೆ 50 ಕೋಟಿ ರೂ. ನೀಡುವಂತೆ ಒತ್ತಡ ಹಾಕಲಾಗುತ್ತಿದ್ದು, ಹಣಕ್ಕಾಗಿ ತಮಗೆ ಬೆದರಿಕೆಯನ್ನೂ ಹಾಕಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಅವರು ತಮ್ಮ ದೂರಿನಲ್ಲಿ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಹಣ ಕೊಡುವುದಿಲ್ಲ ಎಂದಿದ್ದಕ್ಕೆ, ನಿಮ್ಮ ಪ್ರಾಜೆಕ್ಟ್ ಕಂಪ್ಲೀಟ್ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ದೇವಸ್ಥಾನ ಕಟ್ಟಲು ರಮೇಶ್ ಗೌಡ ಕೂಡ 5 ಕೋಟಿ ರೂಪಾಯಿ ಕೇಳಿದ್ದರು. ತುಂಬಾ ಕಷ್ಟವಿದೆ ಯಾವುದೇ ಕಾರಣಕ್ಕೂ ಹಣ ಕೊಡಲ್ಲ ಅಂದಿದ್ದೆ. ವಾರದಿಂದ ರಮೇಶ್ ಗೌಡ ಕಾಲ್, ಮೆಸೇಜ್ ಮಾಡುತ್ತಿದ್ದರು. 2019ರ ಚುನಾವಣೆಯಲ್ಲೂ ಅವರಿಗಾಗಿ ತುಂಬಾ ಖರ್ಚು ಮಾಡಿದ್ದೆವು ಎಂದು ವಿಜಯ್ ಟಾಟ ಹೇಳಿದ್ದಾರೆ.
ಇಬ್ಬರೂ ಜನಪ್ರತಿನಿಧಿಗಳಿಂದ ತಮ್ಮನ್ನು ಹಾಗೂ ತಮ್ಮ ಕುಟುಂಬವನ್ನು ಕಾಪಾಡಬೇಕು. ತಮಗೆ ರಕ್ಷಣೆ ಒದಗಿಸಬೇಕು ಎಂದು ಅವರು ದೂರಿನಲ್ಲಿ ಪೊಲೀಸರಿಗೆ ಮನವಿ ಮಾಡಿದ್ದಾರೆ ಎಂದು ಕೆಲವು ಜಾಲತಾಣಗಳು ವರದಿ ಮಾಡಿವೆ.