Mangaluru: ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ದಾಳಿ ಮಾಡಿದ ನಂತರ, ಪಾಕಿಸ್ತಾನ ಈಗ ಸೈಬರ್ ಯುದ್ಧ (Cyber War) ನಡೆಸಬಹುದು ಎಂಬ ಆತಂಕ ವ್ಯಕ್ತವಾಗಿದೆ. ಮಂಗಳೂರಿನಲ್ಲಿ ಸೈಬರ್ ತಜ್ಞರಾದ ಡಾ. ಅನಂತ ಪ್ರಭು ಈ ಕುರಿತು ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನಿ ಹ್ಯಾಕರ್ಗಳು ಭಾರತವನ್ನು ಗುರಿಯಾಗಿಟ್ಟು ಸರ್ಕಾರದ ವೆಬ್ಸೈಟ್ಗಳನ್ನು ಹ್ಯಾಕ್ ಮಾಡುವ ಯತ್ನ ಮಾಡುವ ಸಾಧ್ಯತೆ ಇದೆ. ಟಿವಿ9 ಗೆ ಮಾತನಾಡಿದ ಡಾ. ಅನಂತ ಪ್ರಭು ಅವರು, ಪ್ರತಿಯೊಬ್ಬರೂ ಸೈಬರ್ ದಾಳಿಗಳಿಂದ ಎಚ್ಚರಿಕೆಯಿಂದಿರಬೇಕು ಎಂದು ಹೇಳಿದ್ದಾರೆ.
ಸೈನಿಕ, ನೌಕಾಪಡೆ, ವಾಯುಪಡೆಗಳಂತೆ ಈಗ ಸೈಬರ್ ವಿಭಾಗವೂ ಪ್ರಮುಖವಾಗಿದೆ. ಕೃತಕ ಬುದ್ಧಿಮತ್ತೆ ಬಳಸಿಕೊಂಡು ವೈರಸ್ ಸೃಷ್ಟಿಸಿ, ವೆಬ್ಸೈಟ್ಗಳನ್ನು ಸುಲಭವಾಗಿ ಹ್ಯಾಕ್ ಮಾಡಬಹುದಾಗಿದೆ. ಡಾರ್ಕ್ ವೆಬ್ ಬಳಸಿಕೊಂಡು ದಾಳಿ ಮಾಡುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.
ಪಾಕಿಸ್ತಾನಿ ಹ್ಯಾಕರ್ಗಳು ಇತರ ದೇಶಗಳ ಸಹಾಯದಿಂದ ದಾಳಿ ಮಾಡಬಹುದು. ಹಾಗಾಗಿ ನಾವು ಯಾವ ದೇಶದ ಸರ್ವರ್ನ್ನು ಬಳಸುತ್ತಿದ್ದೇವೆ ಎಂಬುದನ್ನು ನೋಡಿಕೊಳ್ಳಬೇಕು. ಶತ್ರು ರಾಷ್ಟ್ರದ ಸರ್ವರ್ಗಳಿದ್ದರೆ ಅಪಾಯ ಹೆಚ್ಚು ಎಂದು ಅವರು ತಿಳಿಸಿದ್ದಾರೆ.
ಅನೇಕ ವೆಬ್ಸೈಟ್ಗಳಿಗೆ ಸೆಕ್ಯೂರಿಟಿ ಆಡಿಟ್ (ಭದ್ರತಾ ಪರಿಶೀಲನೆ) ಮಾಡಬೇಕು. ಸೇನೆಯ ಸಿಬ್ಬಂದಿಯು ಹೆಚ್ಚು ಜಾಗರೂಕರಾಗಬೇಕು. ಹನಿಟ್ರ್ಯಾಪ್ ಮೂಲಕ ಮಾಹಿತಿಯ ಚೌರ್ಯವನ್ನೂ ತಪ್ಪಿಸಬೇಕು ಎಂದು ಸಲಹೆ ನೀಡಿದ್ದಾರೆ.
ಸೇನಾ ಅಧಿಕಾರಿಗಳು, ಯೋಧರು, ಸಿಬ್ಬಂದಿಗೆ ಯುವತಿಯರ ಮೂಲಕ ವಿಡಿಯೋ ಕಾಲ್ ಮಾಡಿ ಸ್ಕ್ರೀನ್ ಶೇರ್ ಮೂಲಕ ಮಾಹಿತಿಯನ್ನು ಕದ್ದುಕೊಳ್ಳುವ ಯತ್ನವಾಗಬಹುದು. ಇದರಿಂದ ಸಂವೇದನಾಶೀಲ ಡೇಟಾ ಲೀಕ್ ಆಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.