Bengaluru: ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿದೆ. ಮುಂದಿನ ಮೂರು ದಿನಗಳೂ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Meteorological Department) ಮುನ್ಸೂಚನೆ ನೀಡಿದೆ. ಈ ಮಳೆಯಿಂದಾಗಿ (rain) ಹೊಸೂರು ರಸ್ತೆ, ಹೆಣ್ಣೂರು ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ರಸ್ತೆ ಹಾಗೂ ಅಪಾರ್ಟ್ಮೆಂಟ್ಗಳು ನೀರಿನಲ್ಲಿ ಮುಳುಗಿವೆ. ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ ಕಾರಣ, ಸುಮಾರು 200 ಪ್ರದೇಶಗಳಲ್ಲಿ ಪ್ರವಾಹ ಭೀತಿಯಾಗಿದೆ.
ಇನ್ನೂ ಒಂದು ತಿಂಗಳ ಹಿಂದೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಈ ಪರಿಸ್ಥಿತಿಯ ಬಗ್ಗೆ ಮುನ್ಸೂಚನೆ ನೀಡಿತ್ತು. ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ, ಯಲಹಂಕ ಸೇರಿ 8 BBMP ವಲಯಗಳಲ್ಲಿ ಪ್ರವಾಹಕ್ಕೆ ಅತಿಯಾಗಿ ತುತ್ತಾಗುವ ಪ್ರದೇಶಗಳನ್ನು ಗುರುತಿಸಲಾಗಿತ್ತು.
ಏಪ್ರಿಲ್ 15ರಿಂದಲೇ ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ, ಪೊಲೀಸ್ ಇಲಾಖೆಗಳಿಗೆ ಮುನ್ನೆಚ್ಚರಿಕೆ ನೀಡಲಾಗಿತ್ತು. ಆದರೆ ರಾಜ್ಯ ಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೇ ಇರುವುದು ಸಾರ್ವಜನಿಕ ವಲಯದಿಂದ ಪ್ರಶ್ನೆಗೆ ಗುರಿಯಾಗಿದೆ. “ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ” ಎಂಬ ಎಚ್ಚರಿಕೆಯನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ವಿಪತ್ತು ನಿರ್ವಹಣಾ ಇಲಾಖೆ ಏಪ್ರಿಲ್ 2ರ ಸುತ್ತೋಲೆಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆಗೆ ಒಳಪಟ್ಟ 8 ವಲಯಗಳಲ್ಲಿ 200 ಪ್ರದೇಶಗಳನ್ನು ಪ್ರವಾಹ ಪೀಡಿತ ಸ್ಥಳಗಳಾಗಿ ಗುರುತಿಸಿತ್ತು. ಈ ಪ್ರದೇಶಗಳಿಗೆ 12 ಗಂಟೆಗಳ ಮೊದಲು ಪ್ರವಾಹ ಮುನ್ನೆಚ್ಚರಿಕೆ ಹಾಗೂ ಮಳೆ ಮುನ್ಸೂಚನೆ ನೀಡಬೇಕು ಎಂದು ತಿಳಿಸಲಾಗಿತ್ತು.
ಹವಾಮಾನ, ಮಳೆ ಪ್ರಮಾಣ, ಪ್ರವಾಹ ಸಂಭವನೀಯ ಪ್ರದೇಶಗಳು, ಪರ್ಯಾಯ ರಸ್ತೆ ಮಾರ್ಗಗಳು, ಸಿಡಿಲು ಹಾಗೂ ಮಳೆಯ ನೀರಿನ ಕಾಲುವೆಗಳ ಮಾಹಿತಿ ‘ಬೆಂಗಳೂರು ಮೇಘ ಸಂದೇಶ’ ಮೊಬೈಲ್ ಅಪ್ಲಿಕೇಶನ್, ವೆಬ್ಸೈಟ್ಗಳು, ಮತ್ತು BBMP DM core group ಮೂಲಕ 12 ಗಂಟೆಗೊಮ್ಮೆ ನೀಡಲಾಗುತ್ತಿದೆ.
ಭಾರತೀಯ ಹವಾಮಾನ ಇಲಾಖೆ ಏಪ್ರಿಲ್ 15ರಂದು ನೀಡಿದ ಮುಂಗಾರು ಮುನ್ಸೂಚನೆಯ ಪ್ರಕಾರ, ಕರ್ನಾಟಕದಲ್ಲಿ ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯು ಬಿಬಿಎಂಪಿ ವ್ಯಾಪ್ತಿಯ ಪ್ರವಾಹ ಹಾಗೂ ಅತಿವೃಷ್ಟಿಯಿಂದ ಉಂಟಾಗಬಹುದಾದ ಸಮಸ್ಯೆಗಳನ್ನು ತಡೆಯಲು ಸಿದ್ಧತೆ ಕೈಗೊಳ್ಳುವಂತೆ ಸೂಚನೆ ನೀಡಿತ್ತು.