
Devanahalli : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಕ್ಷ್ಮ ವಲಯಗಳಲ್ಲಿ ಯಾವುದೇ ರೀತಿಯ ಖಾಸಗಿ ಡ್ರೋನ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಅವರು ಆದೇಶ ಹೊರಡಿಸಿದ್ದಾರೆ.
ಡ್ರೋನ್, ರಿಮೋಟ್ ನಿಯಂತ್ರಿತ ಮೈಕ್ರೋಲೈಟ್ ಎರ್ಕ್ರಾಫ್ಟ್, ಪ್ಯಾರಾ-ಗ್ಲೈಡರ್ ಮೊದಲಾದ ಸಾಧನಗಳನ್ನು ದುರುಪಯೋಗ ಪಡಿಸಿ ಭಯೋತ್ಪಾದಕರು ಅಥವಾ ರಾಷ್ಟ್ರವಿರೋಧಿಗಳು ಸಾರ್ವಜನಿಕ ಆಸ್ತಿ ನಾಶಪಡಿಸಿ ಶಾಂತಿ-ಸುವ್ಯವಸ್ಥೆಗೆ ಭಂಗ ತರುವ ಸಾಧ್ಯತೆ ಇರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟು ಇಲ್ಲದಿದ್ದರೂ, ತುರ್ತು ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸೂಕ್ಷ್ಮ ವಲಯಗಳನ್ನು ಗುರುತಿಸಿ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಸಂಬಂಧಿತ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ.
ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ದಳಗಳಿಗೆ ತುರ್ತು ಪರಿಸ್ಥಿತಿಗಳಲ್ಲಿ ಸಿದ್ಧತೆಯಿಂದ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ. ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ಲಭ್ಯತೆ ಖಚಿತಪಡಿಸಿಕೊಳ್ಳಲಾಗುವುದು. ನಾಗರಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಸೂಕ್ಷ್ಮ ವಲಯಗಳ ಪಟ್ಟಿ:
- ದೇವನಹಳ್ಳಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಇಂಡಿಯನ್ ಆಯಿಲ್ ಸ್ಕೈಟ್ಯಾಂಕಿಂಗ್
- ದೊಡ್ಡಬಳ್ಳಾಪುರ: ಮುಶಾಶಿ ಆಟೋ ಪಾರ್ಟ್ಸ್ ಪ್ರೈ. ಲಿಮಿಟೆಡ್
- ಹೊಸಕೋಟೆ: ಐಓಸಿಎಲ್ ಇಂಡೇನ್ ಬಾಟ್ಲಿಂಗ್ ಪ್ಲಾಂಟ್, ಬಿಪಿಸಿಎಲ್, ಎಚ್ಪಿಸಿಎಲ್, ಎಂಆರ್ಇಎಲ್
- ನೆಲಮಂಗಲ: ಜ್ಯೋತಿಗ್ಯಾಸ್, ಇಂಡೋಗ್ಯಾಸ್, ಟೋಟಲ್ ಆಯಿಲ್ ಇಂಡಿಯಾ, ಏಜಿಸ್ ಗ್ಯಾಸ್ ಎಲ್ಪಿಜಿ, ಸ್ನೇಹಾ ಪೆಟ್ರೋಲಿಯಂ, ಜಿಂದಾಲ್ ಅಲ್ಯೂಮಿನಿಯಂ (ರೋಲಿಂಗ್ ಮಿಲ್)
ನಕಲಿ ಸುದ್ದಿಗಳಿಗೆ ಕಠಿಣ ಕ್ರಮ:
ಸಮಾಜ ಮಾಧ್ಯಮಗಳಲ್ಲಿ ಸುಳ್ಳು ಅಥವಾ ಉದ್ದೇಶಪೂರ್ವಕವಾಗಿ ಹಬ್ಬಿಸಲಾದ ನಕಲಿ ಸುದ್ದಿಗಳನ್ನು ತಕ್ಷಣವೇ ನಿಜ ಸಂಗತಿಯೊಂದಿಗೆ ಪರಿಶೀಲಿಸಿ, ಇವುಗಳ ಮೂಲವನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ.
ವಾಟ್ಸ್ಆ್ಯಪ್ ಗ್ರೂಪ್ಗಳ ಮೂಲಕ ಸಮುದಾಯ ಮುಖಂಡರು ಹಾಗೂ ಪ್ರಮುಖ ನಾಗರಿಕರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕೆಂದು ಸೂಚಿಸಲಾಗಿದ್ದು, ಯಾವುದೇ ಅನುಮಾನಾಸ್ಪದ ಸುದ್ದಿಯನ್ನು ಜಿಲ್ಲಾ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ ಸಂಖ್ಯೆ 080-28388005 ಗೆ ತಕ್ಷಣ ತಿಳಿಸಲು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.