Vijayapura, Devanahalli : ಪಟ್ಟಣದ ದೇವನಹಳ್ಳಿ–ಶಿಡ್ಲಘಟ್ಟ ಬೈಪಾಸ್ ರಸ್ತೆಯ ಬಳಿಯ ವಾಟರ್ ಟ್ಯಾಂಕ್ ಬಳಿ ಹುಲ್ಲು ಮೇಯುತ್ತಿದ್ದ ಹಸು ವಿದ್ಯುತ್ ತಂತಿ ತಾಗಿದ ಪರಿಣಾಮ ಶಾಕ್ಗೆ ಒಳಗಾಗಿ ಮೃತಪಟ್ಟಿರುವ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.
ಅಶೋಕನಗರದ ನಾಗವೇಣಮ್ಮ ಅವರು ತಮ್ಮ ಹಸುಗಳನ್ನು ಮೇಯಲು ಬಿಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಹಸಿರು ಹುಲ್ಲು ಮೇಯುತ್ತಿದ್ದ ಹಸು ಪುರಸಭೆಯ ಕೊಳವೆ ಬಾವಿಯ ಯಂತ್ರದ ಬಿಚ್ಚಿದ ವಿದ್ಯುತ್ ತಂತಿಗೆ ತಾಕಿ ಸ್ಥಳದಲ್ಲೇ ಸಾವಿಗೀಡಾಗಿದೆ.
ಸ್ಥಳದಲ್ಲಿ ವಿದ್ಯುತ್ ಪರಿವರ್ತಕ (transformer) ತೆರೆದ ಸ್ಥಿತಿಯಲ್ಲಿ ಇತ್ತು ಹಾಗೂ ಯಂತ್ರದ ತಂತಿಗಳು ಸರಿಯಾಗಿ ಆವರಿಸದೇ ಇದ್ದದ್ದು, ಈ ದುರ್ಘಟನೆಯ ಪ್ರಮುಖ ಕಾರಣವೆಂದು ನಾಗವೇಣಮ್ಮ ದೂರಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮನೋಹರ್ ಡೇರಿ, ಮೃತ ಹಸುವಿನ ಅಂತ್ಯ ಸಂಸ್ಕಾರಕ್ಕೆ ₹2,000 ಸಹಾಯಧನ ನೀಡಿದರು. ಅವರೊಂದಿಗೆ ಡೇರಿಯ ನಿರ್ದೇಶಕ ವೆಂಕಟೇಶ್ ಸಹ ಇದ್ದರು.
“ಇತ್ತೀಚೆಗೆ ಹಸುಗಳು ಶಾಕ್ಗೆ ಒಳಗಾದ ಪ್ರಕರಣಗಳು ಹೆಚ್ಚಾಗುತ್ತಿವೆ. ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲಿ ತೆರೆದ ವಿದ್ಯುತ್ ತಂತಿಗಳು ಅಪಾಯಕಾರಿಯಾಗಿದ್ದು, ಬೆಸ್ಕಾಂ ಇಲಾಖೆ ತಕ್ಷಣ ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳಬೇಕು.” ಎಂದರು.
ಸ್ಥಳೀಯರು ಹಾಗೂ ರೈತರು ಈ ಘಟನೆಯ ಹಿನ್ನೆಲೆಯಲ್ಲಿ ವಿದ್ಯುತ್ ಇಲಾಖೆಯ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ಪುನರಾವೃತವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.