Doddaballapur : ದೊಡ್ಡಬಳ್ಳಾಪುರ ನಗರದ ಸಪ್ತಮಾತೃಕ ಮಾರಿಯಮ್ಮ ದೇವಾಲಯದ ಆವರಣದಲ್ಲಿ ನಡೆಯುತ್ತಿರುವ ಕರಗ ಮಹೋತ್ಸವದ ಅಂಗವಾಗಿ ಬುಧವಾರ ದೇವಾಲಯ ಸಮೀಪದ ಏಳು ಸುತ್ತಿನ ಕೋಟೆ ಆವರಣದಲ್ಲಿ ಒನಕೆ ಕರಗ ಹಾಗೂ ವಸಂತೋತ್ಸವವು ಶ್ರದ್ಧಾ ಸಂಭ್ರಮದಿಂದ ಜರುಗಿತು.
ಕರಗ ಹೊತ್ತಿದ್ದ ಪೂಜಾರಿ ಮುನಿರತ್ನಂ ಬಾಲಾಜಿಯವರು ಪೂಜೆ ಸಲ್ಲಿಸಿ, ಒನಕೆ ಮತ್ತು ಓಕುಳಿಯ ನೀರಿನ ತಪ್ಪಲನ್ನು ತಲೆಯ ಮೇಲೆ ಇಟ್ಟುಕೊಂಡು ನೀಡಿದ ನೃತ್ಯಪ್ರದರ್ಶನ ನೆರೆದ ಭಕ್ತರಲ್ಲಿ ಭಕ್ತಿಭಾವ ಹಾಗೂ ರೋಮಾಂಚನ ಮೂಡಿಸಿತು.
ದೇವಾಲಯ ಮತ್ತು ಸುತ್ತಮುತ್ತಲ ಮನೆಗಳ ಮೇಲಿಂದ ನೂರಾರು ಭಕ್ತರು ಈ ನೃತ್ಯವನ್ನು ಕಣ್ತುಂಬಿಕೊಂಡರು. ಈ ವೇಳೆ ವಹ್ನಿಕುಲ ಮತಸ್ಥರು ಓಕುಳಿಯ ನೀರನ್ನು ಎರಚಿ, ಮಡಿಕೆ ಹೊಡೆದು ವಸಂತೋತ್ಸವವನ್ನು ಹರ್ಷೋಲ್ಲಾಸದಿಂದ ಆಚರಿಸಿದರು. ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯ ಕ್ರಮಗಳು ಸಹ ನಡೆಯುತ್ತಿವೆ.
ಸಪ್ತಮಾತೃಕ ಮಾರಿಯಮ್ಮ ದೇವತೆಯ ಕರಗ ಮಹೋತ್ಸವವು ಅದ್ಧೂರಿಯಾಗಿ ನಡೆಯುತ್ತಿದ್ದು, ಮೇ 5ರಿಂದ ಪ್ರಾರಂಭವಾದ ಧಾರ್ಮಿಕ ಕಾರ್ಯಕ್ರಮಗಳು, ಮೇ 20ರಂದು ಮಾರಿಯಮ್ಮ ದೇವಿ, ಪಿಳೇಕಮ್ಮ ದೇವಿ, ಮುತ್ಯಾಲಮ್ಮ ದೇವಿ ಹಾಗೂ ಶ್ರೀ ದೊಡ್ಡಮ್ಮ ದೇವಿಯ ಆರತಿಗಳೊಂದಿಗೆ ಸಾನ್ನಿಧ್ಯಪೂರ್ವಕವಾಗಿ ಸಮಾರೋಪಗೊಳ್ಳಲಿದೆ.