Doddaballapur : ತೂಬಗೆರೆ ಭಾಗದ ಎಂಟು ಹಲಸಿನ ತಳಿಗಳಿಗೆ ರಾಷ್ಟ್ರಮಟ್ಟದ ಹಕ್ಕುಸ್ವಾಮ್ಯ (ಪೇಟೆಂಟ್) ದೊರೆತು, ಸ್ಥಳೀಯ ರೈತರ ಸಾಧನೆಗೆ ಹೊಸ ಗುರುತು ಸಿಕ್ಕಿದೆ.
ತಾಲ್ಲೂಕಿನ ತೂಬಗೆರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಲಸು ಬೆಳೆ ಕುರಿತು ಕೃಷಿ ವಿಜ್ಞಾನಿಗಳ ಸಂವಾದ ಕಾರ್ಯಕ್ರಮದಲ್ಲಿ, ಈ ಭಾಗದ ಎಂಟು ವಿವಿಧ ಹಳ್ಳಿಗಳ ರೈತರಿಗೆ ಹಲಸಿನ ತಳಿಗಳ ಪೇಟೆಂಟ್ ಪ್ರಮಾಣಪತ್ರಗಳನ್ನು ಭರ್ಜರಿಯಾಗಿ ವಿತರಿಸಲಾಯಿತು.
ಈ ತಳಿಗಳಿಗೆ ‘ಎನ್ಆರ್-1’ ಎಂಬ ವೈಜ್ಞಾನಿಕ ಗುರುತಿನೊಂದಿಗೆ ನಾಮಕರಣ ಮಾಡಲಾಗಿದ್ದು, ರೈತರು ತಮ್ಮ ಇಚ್ಛೆಯ ಪ್ರಕಾರ ಇನ್ಯಾವುದೇ ನಾಮ ನೀಡಿಕೊಂಡು ವ್ಯಾಪಾರ ನಡೆಸಬಹುದಾಗಿದೆ.
ಪಿಪಿಎಫ್ಆರ್ಎ ಪೇಟೆಂಟ್ ಪಡೆದ ಹಲಸು ಬೆಳೆಗಾರ ಕೃಷ್ಣಪ್ಪ ಅವರು ಸಂತಸ ವ್ಯಕ್ತಪಡಿಸಿ, “ನಮ್ಮ ಹೊಲದಲ್ಲಿ ಬೆಳೆದ ಹಲಸಿಗೆ ರಾಷ್ಟ್ರಮಟ್ಟದ ಮಾನ್ಯತೆ ದೊರೆತಿದ್ದು ಹೆಮ್ಮೆಯ ವಿಷಯ. ಮುಂದಿನ 20 ವರ್ಷಗಳವರೆಗೆ ಈ ತಳಿ ಬೆಳೆಸಲು ರೈತರ ಅನುಮತಿ ಅಗತ್ಯ. ಇತರರು ಇದನ್ನು ಬಳಸಬೇಕಾದರೆ ನಮ್ಮ ಅನುಮತಿ ಅಗತ್ಯವಿದೆ” ಎಂದು ಹೇಳಿದರು.
ಜಿಕೆವಿಕೆಯಿಂದ ನಿವೃತ್ತ ಕುಲಪತಿಯಾಗಿರುವ ಡಾ. ನಾರಾಯಣಗೌಡ ಅವರು, “ಸ್ಥಳೀಯವಾಗಿ ಹಲಸಿನ ಮೌಲ್ಯವರ್ಧನೆಗೆ ಅಗತ್ಯ ಅರಿವು ಮೂಡಿಸುತ್ತಿರುವೆವು. ಹಲಸಿನಲ್ಲಿ ನಾರಿನಾಂಶ, ವಿಟಮಿನ್, ಖನಿಜಾಂಶಗಳು ಅಧಿಕವಾಗಿ ದೊರೆಯುತ್ತವೆ. ಈ ಆರೋಗ್ಯವರ್ಧಕ ಹಣ್ಣನ್ನು ಜವಾಬ್ದಾರಿಯಿಂದ ಸಂರಕ್ಷಿಸುವುದು ಈಗ ಪೇಟೆಂಟ್ ಪಡೆದ ರೈತರ ಕರ್ತವ್ಯವಾಗಿದೆ” ಎಂದು ತಿಳಿಸಿದರು.
ತೂಬಗೆರೆ ಹಲಸು ಬೆಳೆಗಾರರ ಸಂಘ, ತೋಟಗಾರಿಕೆ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಮತ್ತು ಭಾರತೀಯ ಕೃಷಿ ಅನುಸಂಧಾನ ಪರಿಷತ್ಗಳ ಸಹಯೋಗದೊಂದಿಗೆ ಈ ತಳಿಗಳ ವೈಜ್ಞಾನಿಕ ವಿಶ್ಲೇಷಣೆಯ ಮೂಲಕ ಹಕ್ಕುಸ್ವಾಮ್ಯ ಸಿದ್ಧಗೊಂಡಿದೆ. ಇದರ ಫಲವಾಗಿ ದೇಶದ ಮಟ್ಟದಲ್ಲಿ ತೂಬಗೆರೆಯ ಹಲಸಿನ ರುಚಿ, ಪರಿಮಳದ ಮಹತ್ವ ಇನ್ನಷ್ಟು ಬಿಂಬಿಸಲಿದೆ.
ಈ ವೇಳೆ ಜಿಕೆವಿಕೆ ವಿಜ್ಞಾನಿ ಡಾ. ಶಾಮಲ ಅವರು ಹಲಸಿನ ಸಾಗಣೆ, ಮಾರುಕಟ್ಟೆ, ಮೌಲ್ಯವರ್ಧಿತ ಉತ್ಪನ್ನಗಳು ಮತ್ತು ಕೊಯ್ಯುವ ಯಂತ್ರಗಳ ಕುರಿತು ಮಾಹಿತಿ ನೀಡಿದರು. ಹಲಸಿನಿಂದ ತಯಾರಿಸಿದ ಹಪ್ಪಳ, ಚಿಪ್ಸ್ ಸೇರಿದಂತೆ ವಿವಿಧ ಉತ್ಪನ್ನಗಳ ಪ್ರದರ್ಶನವೂ ನಡೆಯಿತು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625/625 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮೆಳೆಕೋಟೆ ಕ್ರಾಸ್ನ ಎಸ್.ಜೆ.ಸಿ.ಆರ್ ಶಾಲೆಯ ರಂಜಿತಾ ಎ.ಸಿ ಅವರನ್ನು ಸಂಘದಿಂದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಡಾ. ಹನುಮಂತರಾಯ, ಡಾ. ಬಾಬುರಾಯ್, ಡಾ. ಸವಿತಾ, ರಾಜ್ಯ ತೆಂಗು ನಾರು ಮಂಡಳಿ ಅಧ್ಯಕ್ಷ ವೆಂಕಟೇಶ್ಬಾಬು, ತೂಬಗೆರೆ ಜಿಪಂ ಅಧ್ಯಕ್ಷೆ ಮುನಿಲಕ್ಷ್ಮಮ್ಮರಾಮಕೃಷ್ಣ, ಸದಸ್ಯರು ಕೃಷ್ಣಪ್ಪ, ನಾಗರಾಜುಅಪ್ಪಯ್ಯಣ್ಣ, ಹಲಸು ಬೆಳೆಗಾರರ ಸಂಘದ ಅಧ್ಯಕ್ಷ ಸುರೇಶ್, ವಕೀಲ ಪ್ರತಾಪ್, ಮಾಜಿ ಜಿಲ್ಲಾ ಪಂ. ಸದಸ್ಯ ಅರವಿಂದ, ಮುಖಂಡರು ವೆಂಕಟೇಶ್, ಕನಕದಾಸ, ರವಿಸಿದ್ದಪ್ಪ, ಉದಯ ಆರಾಧ್ಯ, ವಾಸು, ರಂಗಪ್ಪ, ಶ್ರೀಧರ ಮತ್ತಿತರರು ಭಾಗವಹಿಸಿದ್ದರು.