
ಹೈದರಾಬಾದ್ನಲ್ಲಿ ಪ್ರಸಿದ್ಧ ಸುದ್ದಿ ನಿರೂಪಕಿ ಶ್ವೇಚ್ಛಾ ವೋತಾರ್ಕರ್ (Famous news anchor Shwechcha Votarkar) (35) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಅವರು ಕಳೆದ 18 ವರ್ಷಗಳಿಂದ ತೆಲುಗು ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಟಿ ನ್ಯೂಸ್ ಚಾನೆಲ್ನಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಶುಕ್ರವಾರ ಸಂಜೆ, ಹೈದರಾಬಾದ್ನ ಜವಾಹರ್ ನಗರದಲ್ಲಿರುವ ತಮ್ಮ ಮನೆಯಲ್ಲಿ ಶ್ವೇಚ್ಛಾ ಫ್ಯಾನ್ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅವರ ಮೃತದೇಹವನ್ನು ಗಾಂಧಿ ಆಸ್ಪತ್ರೆಗೆ ಕಳಿಸಿದ್ದಾರೆ. ಶ್ವೇಚ್ಛಾ ತಮ್ಮ ತಾಯಿ ಶ್ರೀದೇವಿಯೊಂದಿಗೆ ರಾಮ್ ನಗರದಲ್ಲಿ ವಾಸಿಸುತ್ತಿದ್ದರು.
ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ಆತ್ಮಹತ್ಯೆಗೆ ಕೆಲವೇ ಗಂಟೆಗಳ ಮುನ್ನ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬುದ್ಧನ ಉಲ್ಲೇಖವಿರುವ ಫೋಟೋವನ್ನು ಶೇರ್ ಮಾಡಿದ್ದರು. ಆ ಉಲ್ಲೇಖದಲ್ಲಿ – “ಮನಸ್ಸು ಶಾಂತವಾಗಿದ್ದರೆ, ಆತ್ಮ ಮಾತನಾಡುತ್ತದೆ” ಎಂದು ಬರೆಯಲಾಗಿತ್ತು. ಈ ಪೋಸ್ಟ್ ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಈ ಮೊದಲು ಟಿವಿ9 ತೆಲುಗು ಚಾನೆಲ್ ನಲ್ಲಿಯೂ ಅವರು ಕೆಲಸ ಮಾಡಿದ್ದರು. ಪ್ರಸ್ತುತ ಪೊಲೀಸರು ಈ ಘಟನೆಯನ್ನು ಅನುಮಾನಾಸ್ಪದ ಸಾವು ಎಂದು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.