
Haveri: ಹಾವೇರಿ ತಾಲ್ಲೂಕಿನ ಸಂಗೂರು ಗ್ರಾಮದ ಬಳಿ ಇರುವ ಜಿ.ಎಂ. ಶುಗರ್ಸ್ ಕಂಪನಿಯು ಎಫ್ಆರ್ಪಿ (FRP) ದರದಂತೆ ಬಾಕಿ ಹಣ ನೀಡದೆ ರೈತರ ಕೋಟ್ಯಾಂತರ ರೂಪಾಯಿ ಉಳಿಸಿಕೊಂಡಿದೆ ಎಂಬ ಆರೋಪದ ಮೇಲೆ ಕಬ್ಬು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ (Farmers protest) ತೊಡಗಿದ್ದಾರೆ.
ಜಿ.ಎಂ. ಶುಗರ್ಸ್ ಕಂಪನಿಯು ಕಳೆದ ವರ್ಷ ಸುಮಾರು 2 ಲಕ್ಷ ಟನ್ ಕಬ್ಬು ನುರಿಸಿ, ಸರ್ಕಾರ ನಿಗದಿಪಡಿಸಿದ ಪ್ರತಿಟನ್ 3151 ರೂ. ಬದಲಿಗೆ ಕೇವಲ 3035 ರೂ. ಮಾತ್ರ ರೈತರಿಗೆ ಪಾವತಿಸಿದೆ. ಇದರಿಂದ ಪ್ರತಿಟನ್ಗೆ 116 ರೂ. ಬಾಕಿ ಉಳಿದು, ಮೊತ್ತಿಗೆ ಸುಮಾರು 2.32 ಕೋಟಿ ರೂ. ರೈತರಿಗೆ ಕೊಡಬೇಕಿದೆ. ಆರಂಭದಲ್ಲಿ ಬಾಕಿ ಹಣ ನೀಡುವುದಾಗಿ ಹೇಳಿದ ಕಂಪನಿ ಈಗ ಬೇರೆ ಕಾರಣಗಳನ್ನು ಹೇಳುತ್ತಿದೆಯೆಂದು ರೈತರು ದೂರಿದ್ದಾರೆ.
ಮಕ್ಕಳ ಶಾಲಾ ಫೀ, ಬಿತ್ತನೆ, ಗೊಬ್ಬರ ಖರೀದಿಗೆ ಹಣ ಇಲ್ಲದ ಸ್ಥಿತಿ. “ಕಂಬಣಿಯಿಂದ ಕಂಪನಿ ಕಡೆಯೇ ಓಡಾಡೋದು ನಮ್ಮ ಕೆಲಸವಾಗಿದೆ” ಎನ್ನುತ್ತಾರೆ ರೈತ ಮುಖಂಡ ಭುವನೇಶ್ವರ್ ಶಿಡ್ಲಾಪುರ.
ಕಾರ್ಖಾನೆ ರಾತ್ರೋರಾತ್ರಿ ಗೋದಾಮಿನಲ್ಲಿ ಇರುವ ಸಕ್ಕರೆಯನ್ನು ಲಾರಿಗಳಲ್ಲಿ ಮಾರಾಟಕ್ಕೆ ತಯಾರಿ ನಡೆಸಿದುದನ್ನು ರೈತರು ತಡೆದಿದ್ದಾರೆ. 20ಕ್ಕೂ ಹೆಚ್ಚು ಲಾರಿಗಳನ್ನು ನಿಲ್ಲಿಸಿ, ಕಾರ್ಖಾನೆ ಗೇಟ್ಗೆ ಬೀಗ ಹಾಕಿ ಸಕ್ಕರೆ ಹೊರ ಹೋಗದಂತೆ ಮಾಡಿದ್ದಾರೆ. “ಮೊದಲು ಬಾಕಿ ಹಣ ಕೊಡಿ, ನಂತರ ಸಕ್ಕರೆ ಕಳಿಸಿ” ಎಂದು ರೈತ ಮುಖಂಡ ಶಿವನಾಗಪ್ಪ ಮಲಗುಂದ ಆಗ್ರಹಿಸಿದ್ದಾರೆ.
ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರೂ ಆಡಳಿತ ಮಂಡಳಿ ಸಲಹೆ ತಳ್ಳಿಹಾಕಿದೆ. ಜಿಲ್ಲಾಡಳಿತದ ಸೂಚನೆಗೂ ಕಂಪನಿ ನಿರ್ಲಕ್ಷ್ಯ ವಹಿಸುತ್ತಿದೆಯೆಂದು ರೈತರು ಆರೋಪಿಸಿದ್ದಾರೆ.
ಕಂಪನಿಯ ಎಂಡಿ ಜಿ.ಎಂ. ಲಿಂಗರಾಜ್: “ನನಗೆ ಈ ವಿಷಯ ಗೊತ್ತಿಲ್ಲ, ನಾನು ಬೇರೆ ಕಡೆ ಇದ್ದೇನೆ. ನಂತರ ವಿಚಾರಿಸುತ್ತೇನೆ” ಎಂದು ಪ್ರತಿಕ್ರಿಯಿಸಿದ್ದಾರೆ.