Srinagar: ಕಾಶ್ಮೀರದ (Kashmir) ಬೇಸಿಗೆ ರಾಜಧಾನಿ ಶ್ರೀನಗರದಲ್ಲಿ ಭಾನುವಾರ ಒಂದು ದುರಂತ ಘಟನೆ ಸಂಭವಿಸಿದ್ದು, ಒಂದೇ ಕುಟುಂಬದ ಐವರು ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ. ಮೃತರಲ್ಲಿ ಪೋಷಕರು, ಅವರ ಇಬ್ಬರು ಅಪ್ರಾಪ್ತ ಮಕ್ಕಳು, ಮತ್ತು ಕೇವಲ 28 ದಿನಗಳ ಶಿಶು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರನ್ನು ಬಾರಾಮುಲ್ಲಾ ಜಿಲ್ಲೆಯ ಉರಿಯ ನಿವಾಸಿಗಳಾದ ಅಜಾಜ್ ಅಹ್ಮದ್ ಭಟ್ ಮತ್ತು ಅವರ ಕುಟುಂಬದವರು ಎಂದು ಗುರುತಿಸಲಾಗಿದೆ.
ಭಟ್ ಕುಟುಂಬವು ಶ್ರೀನಗರದಲ್ಲಿ ಕಳೆದ ಎರಡು ತಿಂಗಳಿನಿಂದ ಬಾಡಿಗೆ ವಸತಿಯಲ್ಲಿ ವಾಸಿಸುತ್ತಿದ್ದರು. ಅಜಾಜ್ ಅಹ್ಮದ್ ಭಟ್ ಸ್ಥಳೀಯ ಖಾಸಗಿ ಹೋಟೆಲ್ ನಲ್ಲಿ ಬಾಣಸಿಗರಾಗಿದ್ದರು.
ಅಜಾಜ್ ಅವರ ತಾಯಿ, ತಮ್ಮ ಮಗನೊಂದಿಗೆ ಸಂಪರ್ಕಿಸಲು ಸಾಧ್ಯವಾಗದ ಕಾರಣ, ಮನೆ ಮಾಲೀಕ ಮುಖ್ತಾರ್ ಅಹ್ಮದ್ ಅವರನ್ನು ಸಂಪರ್ಕಿಸಿದರು. ಮುಖ್ತಾರ್ ಮತ್ತೊಬ್ಬ ಬಾಡಿಗೆದಾರನ ಮೂಲಕ ಪರಿಶೀಲಿಸಿದಾಗ, ಮನೆಯ ಬಾಗಿಲು ತೆರೆಯಲಾಗಿ, ಅಜಾಜ್, ಅವರ ಪತ್ನಿ, ಮತ್ತು ಮೂವರು ಮಕ್ಕಳು ಮೃತಪಟ್ಟಿರುವುದು ಕಂಡುಬಂದಿದೆ.
ಅಧಿಕಾರಿಗಳ ಪ್ರಕಾರ, ಹೀಟಿಂಗ್ ಉಪಕರಣದಿಂದ ಕಾರ್ಬನ್ ಮಾನಾಕ್ಸೈಡ್ ಹೆಚ್ಚಾದ ಪರಿಣಾಮ ಉಸಿರುಗಟ್ಟುವಿಕೆ ಉಂಟಾಗಿದೆ.
ಕಣಿವೆ ನಾಡಿನಲ್ಲಿ ತೀವ್ರ ಚಳಿ ಇರುವ ಕಾರಣ ಜನರು ಹೀಟಿಂಗ್ ಉಪಕರಣಗಳನ್ನು ಹೆಚ್ಚು ಬಳಸುತ್ತಿದ್ದಾರೆ. ಆದರೆ, ಈ ಉಪಕರಣಗಳ ಅನಿಯಂತ್ರಿತ ಬಳಕೆಯಿಂದ ಕಾರ್ಬನ್ ಮಾನಾಕ್ಸೈಡ್ ಪ್ರಮಾಣ ಹೆಚ್ಚಾಗಿ ಉಸಿರುಗಟ್ಟುವಿಕೆ ಆಗುವ ಅಪಾಯವಿದೆ.
ಇದು ಕಾಶ್ಮೀರದಲ್ಲಿ ಈಚೆಗೆ ಸಂಭವಿಸಿದ ಎರಡನೇ ದುರಂತ. ಬಾರಾಮುಲ್ಲಾ ಜಿಲ್ಲೆಯ ತಂಗ್ಮಾರ್ಗ್ ನಲ್ಲಿ ಟಿನ್ ಶೆಡ್ ಮನೆಗೆ ಬೆಂಕಿ ತಗುಲಿ, ಇಬ್ಬರು ಅಪ್ರಾಪ್ತರು ಪ್ರಾಣ ಕಳೆದುಕೊಂಡಿದ್ದರು.
ಜನರು ತೀವ್ರ ಚಳಿಯಿಂದ ರಕ್ಷಿಸಿಕೊಳ್ಳುವ ವೇಳೆ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.