ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ (Ind vs Eng Test Series) ಮೊದಲ ಪಂದ್ಯ ಲೀಡ್ಸ್ನ ಹೆಡಿಂಗ್ಲಿ ಮೈದಾನದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಭಾರತ 854 ರನ್ ಗಳಿಸಿದರೂ, ಇಂಗ್ಲೆಂಡಿನ ಎದುರು 5 ವಿಕೆಟ್ಗಳಿಂದ ಸೋಲನ್ನು ಅನುಭವಿಸಿತು. ಎರಡೂ ಇನ್ನಿಂಗ್ಸ್ ನಲ್ಲೂ ಭಾರತೀಯ ಆಟಗಾರರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಐದು ಶತಕಗಳನ್ನು ಬಾರಿಸಿದರೂ ಜಯ ಸಾಧಿಸಲು ಸಾಧ್ಯವಾಗಲಿಲ್ಲ.
ಈಗ ಭಾರತ ಎರಡನೇ ಟೆಸ್ಟ್ ಪಂದ್ಯಕ್ಕಾಗಿ ತಯಾರಿ ನಡೆಸುತ್ತಿದೆ. ಜುಲೈ 2ರಂದು ಎಡ್ಜ್ಬಾಸ್ಟನ್ನಲ್ಲಿ (Edgbaston) ಪಂದ್ಯ ನಡೆಯಲಿದೆ. ಆದರೆ ಈ ನಡುವೆಯೇ ಸ್ಟಾರ್ ಬೌಲರ್ ಹರ್ಷಿತ್ ರಾಣಾ ಅವರನ್ನು ಭಾರತ ತಂಡದಿಂದ ತೆಗೆದು ಭಾರತಕ್ಕೆ ವಾಪಸ್ ಕಳುಹಿಸಲಾಗಿದೆ.
ಮೊದಲ ಟೆಸ್ಟ್ಗೂ ಮೊದಲು ರಾಣಾ ಅವರನ್ನು ಹೆಚ್ಚುವರಿ ಆಟಗಾರನಾಗಿ ಸೇರ್ಪಡೆಗೊಳಿಸಲಾಗಿತ್ತು. ಆದರೆ ಈಗ ಅವರ ಸೇವೆಯ ಅಗತ್ಯವಿಲ್ಲ ಎಂಬ ಕಾರಣದಿಂದ ಅವರನ್ನು ಬಿಡುಗಡೆ ಮಾಡಲಾಗಿದೆ. ಬುಧವಾರ ತಂಡ ಬರ್ಮಿಂಗ್ಹ್ಯಾಮ್ಗೆ ಹೊರಟಾಗ ಅವರು ಜೊತೆಗೆ ಇರಲಿಲ್ಲ ಎಂದು ವರದಿಯಾಗಿದೆ.
ಕೋಚ್ ಗೌತಮ್ ಗಂಭೀರ್ ಮಾತನಾಡುತ್ತಾ, “ಆಟಗಾರರಿಗೆ ಗಾಯಗಳಾದರೆ ಬ್ಯಾಕಪ್ ಆಗಿ ಹರ್ಷಿತ್ ರಾಣಾ ಅವರನ್ನು ಸೇರಿಸಿದ್ದೆವು. ಆದರೆ ಈಗ ಎಲ್ಲರೂ ಆರೋಗ್ಯವಾಗಿದ್ದಾರೆ. ಆದ್ದರಿಂದ ಅವರನ್ನು ಮನೆಗೆ ಕಳುಹಿಸಲಾಗಿದೆ,” ಎಂದು ವಿವರಿಸಿದ್ದಾರೆ.