ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ (KRS) ಜಲಾಶಯದ ಬೃಂದಾವನ ಉದ್ಯಾನವನ್ನೊಳಗೊಂಡ ಪ್ರದೇಶದಲ್ಲಿ 2,000 ಕೋಟಿ ರೂಪಾಯಿ ವೆಚ್ಚದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ (Amusement Park) ಅಥವಾ ಡಿಸ್ನಿ ಲ್ಯಾಂಡ್ ನಿರ್ಮಿಸಲು ಸರ್ಕಾರ ಟೆಂಡರ್ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿಯಿಂದ ಕೆಲವು ನಿವಾಸಿಗಳು ಹೈಕೋರ್ಟ್ಗೆ (High Court) ಅರ್ಜಿ ಸಲ್ಲಿಸಿದರು.
ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಕೂಡಲೇ, ಯೋಜನೆಯ ಸಂಪೂರ್ಣ ವಿವರಗಳನ್ನು ಸಲ್ಲಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ.
ಅರ್ಜಿದಾರರ ವಕೀಲರ ಪ್ರಕಾರ, KRS ಜಲಾಶಯವು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮಹತ್ವದ ನೀರಾವರಿ ಯೋಜನೆಯ ಭಾಗವಾಗಿದ್ದು, ಲಕ್ಷಾಂತರ ಎಕರೆ ಕೃಷಿ ಭೂಮಿಗೆ ನೀರಾವರಿ ಕಲ್ಪಿಸುತ್ತಿದೆ. ಬೃಂದಾವನ ಉದ್ಯಾನವನ್ನೂ ಈ ದೃಷ್ಟಿಯಿಂದ ನಿರ್ಮಿಸಲಾಗಿತ್ತು. ಆದರೆ ಇದೀಗ ಈ ಪ್ರದೇಶದಲ್ಲಿ ಕೇವಲ ಮನರಂಜನೆಗಾಗಿ ಖಾಸಗಿ ಸಹಭಾಗಿತ್ವದೊಂದಿಗೆ ಪಾರ್ಕ್ ನಿರ್ಮಿಸಲು ಸರ್ಕಾರ ಮುಂದಾಗಿದೆ.
ಈ ಯೋಜನೆಯಿಂದ ನೀರಾವರಿ ವ್ಯವಸ್ಥೆಗೂ, ರೈತ ಸಮಾಜಕ್ಕೂ ನಷ್ಟವಾಗುವ ಸಾಧ್ಯತೆ ಇದೆ. ಹೀಗಾಗಿ ಈ ಯೋಜನೆಗೆ ಟೆಂಡರ್ ಆಹ್ವಾನಿಸಿರುವ ಅಧಿಸೂಚನೆಯನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ನ್ಯಾಯಾಲಯವನ್ನು ಮನವಿ ಮಾಡಿಕೊಂಡಿದ್ದಾರೆ.