Bengaluru: ಸಚಿವ ಡಿ.ಸುಧಾಕರ್ (Minister D. Sudhakar) ಅವರ ವಿರುದ್ಧ ಜಮೀನು ಕಬಳಿಸಿ ಪರಿಶಿಷ್ಟ ಜಾತಿಯವರ ಮೇಲೆ ದೌರ್ಜನ್ಯ ಮಾಡಿದ ಆರೋಪದ ಮೇಲೆ ಯಲಹಂಕ ಪೊಲೀಸರಿಂದ ದಾಖಲಾದ ಪ್ರಕರಣವನ್ನು ಹೈಕೋರ್ಟ್ (High Court) ಬುಧವಾರ ರದ್ದುಪಡಿಸಿದೆ.
ಡಿ.ಸುಧಾಕರ್ ಮತ್ತು ಮತ್ತಿತರರು ಈ ಪ್ರಕರಣದ FIR ರದ್ದುಗೊಳಿಸಲು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದ FIR ಹಾಗೂ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕ್ರಿಯೆ ಸಂಪೂರ್ಣವಾಗಿ ರದ್ದುಪಡಿಸುವಂತೆ ಆದೇಶ ನೀಡಿದೆ. ಈ ನಿರ್ಣಯದೊಂದಿಗೆ ಸಚಿವ ಸುಧಾಕರ್ ತಾತ್ಕಾಲಿಕವಾಗಿ ನಿರಾಳರಾಗಿದ್ದಾರೆ.
ಪ್ರಕರಣದ ಹಿನ್ನೆಲೆ: ಸೆವನ್ ಹಿಲ್ಸ್ ಡೆವಲಪರ್ಸ್ ಕಂಪನಿಯ ನಿರ್ದೇಶಕರಾಗಿದ್ದ ಡಿ.ಸುಧಾಕರ್, ಜಿ. ಶ್ರೀನಿವಾಸ್ ಮತ್ತು ಭಾಗ್ಯಮ್ಮ ಅವರು ಯಲಹಂಕ ನಿವಾಸಿ ಸುಬ್ಬಮ್ಮ ಎಂಬವರ ಕುಟುಂಬದ ಜಮೀನು ಕಬಳಿಸಿದ್ದಾರೆ ಎಂಬ ಆರೋಪವಿತ್ತು. ಈ ಪ್ರಕರಣ ಸಿವಿಲ್ ನ್ಯಾಯಾಲಯ ಹಾಗೂ ಹೈಕೋರ್ಟಿನಲ್ಲಿ ವಿಚಾರಣೆಯಲ್ಲಿದೆ.
ಸುಧಾಕರ್ ಸೇರಿದಂತೆ ಕೆಲವರು ಮನೆ ತೆರವುಗೊಳಿಸುತ್ತಿದ್ದಾಗ, ಸುಬ್ಬಮ್ಮ ಸ್ಥಳಕ್ಕೆ ಹೋಗಿ ಪ್ರಶ್ನಿಸಿದಾಗ 35ಕ್ಕೂ ಹೆಚ್ಚು ಮಂದಿ ಅವಳ ಮೇಲೆ ದೌರ್ಜನ್ಯ ನಡೆಸಿದರು, ಮಗಳ ಮೇಲೆ ಹಲ್ಲೆ ನಡೆಸಿದರು ಮತ್ತು ಜಾತಿಯ ಆಧಾರದ ಮೇಲೆ ನಿಂದಿಸಿದರು ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಈ ಕುರಿತು ಯಲಹಂಕ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 10ರಂದು ದೂರು ನೀಡಲಾಗಿತ್ತು. ಪೊಲೀಸರು ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯಿದೆ ಹಾಗೂ ಐಪಿಸಿ ಸೆಕ್ಷನ್ಗಳಡಿ ಎಫ್ಐಆರ್ ದಾಖಲಿಸಿದ್ದರು. ಇದೀಗ ಹೈಕೋರ್ಟ್ ಈ ಪ್ರಕರಣವನ್ನು ರದ್ದುಪಡಿಸಿದೆ.