Ballari: BJP ಯಿಂದ ಉಚ್ಚಾಟನೆಯಾದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ (K.S. Eshwarappa) ಅವರು ಮತ್ತೆ ಪಕ್ಷಕ್ಕೆ ಸೇರುವ ಸಾಧ್ಯತೆ ಬಗ್ಗೆ ಮಾತನಾಡಿದ್ದಾರೆ. “ನನ್ನ ಜೀವವೇ ಬಿಜೆಪಿಯಲ್ಲಿ ಇದೆ. ನಾನು ಯಾವತ್ತೂ ಬೇರೆ ಪಕ್ಷ ಸೇರಲ್ಲ” ಎಂದು ಅವರು ಮಾಧ್ಯಮಗಳೊಂದಿಗೆ ಸ್ಪಷ್ಟಪಡಿಸಿದ್ದಾರೆ.
“ನಾನು ಯಾವುದೇ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ. ಬಿಜೆಪಿ ನನ್ನ ಸೈದ್ಧಾಂತಿಕ ನೆಲೆ. ಈ ಪಕ್ಷವನ್ನು ನಾನು, ಯಡಿಯೂರಪ್ಪ, ಅನಂತ್ ಕುಮಾರ್ ಹಾಗೂ ಇತರ ಹಿರಿಯರು ಕಟ್ಟಿದ್ದೇವೆ. ಕೆಲವರು ರಕ್ತ ಸುರಿಸಿ ಈ ಪಕ್ಷವನ್ನು ನಿರ್ಮಿಸಿದ್ದಾರೆ. ಹೀಗಾಗಿ ಬೇರೆ ಪಕ್ಷ ಸೇರುವುದು ನನಗೆ ಸಾಧ್ಯವಿಲ್ಲ. ಕೆಲ ಹಿರಿಯರು ನನ್ನೊಂದಿಗೆ ಮಾತುಕತೆ ನಡೆಸಲು ಬಯಸಿದ್ದಾರೆ. ಮುಂದೇನಾಗುತ್ತೆ ಅನ್ನೋದನ್ನು ನೋಡೋಣ” ಎಂದು ಈಶ್ವರಪ್ಪ ಅವರು ಹೇಳಿದರು.
“ಸಿಎಂ ಸಿದ್ದರಾಮಯ್ಯ ಹಾಗೂ ಅವರ ಸಚಿವರು ಕಾಂಗ್ರೆಸ್ಗೆ ಬರಲು ನನಗೆ ಮತ್ತು ನನ್ನ ಮಗನಿಗೆ ಆಹ್ವಾನ ನೀಡಿದ್ದರು. ಸ್ಥಾನಮಾನವೂ ಕೊಡುತ್ತೇವೆ ಎಂದಿದ್ದರು. ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರಿಂದಲೂ ಆಫರ್ ಬಂದಿತ್ತು. ಆದರೆ ನಾನು ಹಿಂದುತ್ವದಲ್ಲಿ ನಂಬಿಕೆ ಇಟ್ಟವನು. ಸತ್ತರೂ ಹಿಂದುತ್ವ ಬಿಟ್ಟು ಬೇರೆ ಕಡೆ ಹೋಗಲ್ಲ” ಎಂದರು.
“ರಾಜ್ಯದಲ್ಲಿ ಬಿಜೆಪಿ ಸಂಘಟನೆಯು ಕುಸಿದಿದೆ. ಪಕ್ಷವನ್ನು ಪುನಃ ಕಟ್ಟಬೇಕಿದೆ. ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವುದು ಈಗ ಮುಕ್ತಾಯ. ಕುರುಬ ಸಮುದಾಯದ ಸಭೆಯಲ್ಲಿ ನನ್ನನ್ನು ಮತ್ತೆ ಬಿಜೆಪಿ ಸೇರಿಸಬೇಕೆಂಬ ಒತ್ತಾಯವೂ ಕೇಳಿ ಬಂದಿದೆ” ಎಂದರು.
“RSS ನಾಯಕ ದತ್ತಾತ್ರೇಯ ಹೊಸಬಾಳೆ ಸಮಾಜವಾದದ ಬಗ್ಗೆ ಮಾತನಾಡಿದ ಮೇಲೆ ಅವರ ಟೀಕೆಗಳು ಬಂದಿವೆ. ಆದರೆ ‘ಸಮಾಜವಾದ’ ಮತ್ತು ‘ಜಾತ್ಯತೀತ’ ಪದಗಳು ಡಾ. ಅಂಬೇಡ್ಕರ್ ಅವರ ಮೂಲ ಸಂವಿಧಾನದಲ್ಲಿ ಇರಲಿಲ್ಲ. ಇವುಗಳನ್ನು ಇಂದಿರಾಗಾಂಧಿ ಅಧಿಕಾರ ಬಳಸಿ ಸೇರಿಸಿದ್ದಾರೆ” ಎಂದು ಹೇಳಿದರು.
ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಉಳಿದ ಉಚ್ಚಾಟಿತರನ್ನು ಪಕ್ಷಕ್ಕೆ ಸೇರಿಸೋಣವೇ? ಎಂಬ ಪ್ರಶ್ನೆಗೆ ಈಶ್ವರಪ್ಪ ಅವರು ಪ್ರತಿಕ್ರಿಯಿಸಿದರು, “ನನ್ನನ್ನೇ ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ನಾನು ಕೇಳಿಲ್ಲ. ಇತರರ ಬಗ್ಗೆ ನಾನು ಹೇಳೋದಿಲ್ಲ.”