
IPL 2025ರಲ್ಲಿ ಚಾಂಪಿಯನ್ ಆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, ವಿಜಯೋತ್ಸವದ ವೇಳೆ ಸಂಭವಿಸಿದ ದುರ್ಘಟನೆಯಿಂದಾಗಿ ವಿವಾದಕ್ಕೆ ಸಿಲುಕಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯೋತ್ಸವದ ವೇಳೆ ಭಾರೀ ಕಾಲ್ತುಳಿತ ಸಂಭವಿಸಿ 11 ಜನರು ಮೃತಪಟ್ಟಿದ್ದಾರೆ. ಈ ಘಟನೆ ಸಂಬಂಧ RCB, ಕರ್ನಾಟಕ ಕ್ರಿಕೆಟ್ ಸಂಘ (KSCA) ಮತ್ತು ಕಾರ್ಯಕ್ರಮ ಆಯೋಜನೆ ಸಂಸ್ಥೆ ಡಿಎನ್ಎ ಎಂಟರ್ಟೈನ್ಮೆಂಟ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಸಂಬಂಧ RCB ಯ ಮಾರುಕಟ್ಟೆ ಮುಖ್ಯಸ್ಥ ನಿಖಿಲ್ ಸೋಸಲೆ ಮತ್ತು ಡಿಎನ್ಎ ಸಂಸ್ಥೆಯ ಪ್ರತಿನಿಧಿಗಳಾದ ಸುನಿಲ್ ಮ್ಯಾಥ್ಯೂ, ಕಿರಣ್ ಮತ್ತು ಸುಮಂತ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕೆಲವರು ಈ ದುರ್ಘಟನೆಗೆ ಆಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತಪಡಿಸಿದ್ದಾರೆ.
ಇನ್ನು ಕೆಲವರು, ಈ ದುರಂತಕ್ಕೆ ವಿರಾಟ್ ಕೊಹ್ಲಿ ಸೇರಿದಂತೆ RCB ಆಟಗಾರರೂ ಹೊಣೆ ಎಂಬಂತೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಇದುವರೆಗೆ ಯಾವುದೇ FIR ದಾಖಲಾಗಿಲ್ಲ.
ಇದೊಂದರ ನಡುವೆಯೇ, 2026ರ ಐಪಿಎಲ್ ಋತುವಿನಿಂದ RCB ತಂಡವನ್ನು ಬ್ಯಾನ್ ಮಾಡಲಾಗುತ್ತದೆ ಎಂಬ ಅಪಾಧಿತ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಈ ಸುದ್ದಿ ನಿಜವಲ್ಲ. ತನಿಖೆ ನಡೆಯುತ್ತಿರುವಾಗ ಕೆಲವು ಕಿಡಿಗೇಡಿಗಳು ಸುಳ್ಳು ಮಾಹಿತಿಯನ್ನು ಹರಡುತ್ತಿದ್ದಾರೆ.
ಆರ್ಸಿಬಿ ಫ್ರಾಂಚೈಸಿ ಕೂಡಾ ಮೃತರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರವನ್ನು ಘೋಷಿಸಿದ್ದು, ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ತಿಳಿಸಿದೆ. ಕರ್ನಾಟಕ ಸರ್ಕಾರವೂ ತಲಾ ₹25 ಲಕ್ಷ ಪರಿಹಾರ ನೀಡುವುದಾಗಿ ಪ್ರಕಟಿಸಿದೆ.
RCB ಮೇಲೆ ಯಾವುದೇ ಅಧಿಕೃತ ನಿಷೇಧ ಇಲ್ಲ. ಘಟನೆಯ ತನಿಖೆ ಮುಂದುವರಿದಿದ್ದು, BCCI ಅಥವಾ ಐಪಿಎಲ್ ಮಂಡಳಿಯಿಂದ ಯಾವುದೇ ನಿಷೇಧ ಸಂಬಂಧಿತ ಪ್ರಕಟಣೆ ಬಂದಿಲ್ಲ. ಸದ್ಯಕ್ಕೆ RCB ತಂಡ ಬ್ಯಾನ್ ಆಗುವುದೆಂಬುದು ಸುಳ್ಳು ಸುದ್ದಿ.