
Belagavi: “ಪಹಲ್ಗಾಮ್ ನಲ್ಲಿ (Pahalgam) ಮೃತಪಟ್ಟ 26 ಜನ ಪ್ರವಾಸಿಗರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಅದಕ್ಕಾಗಿ ಇನ್ನೂ ಕಾಯಬೇಕಾಗುತ್ತದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮದ ಕಾರಣ ಯುದ್ಧ ಸ್ಥಗಿತಗೊಂಡಿದೆ. ಮುಂದೇನು ಮಾಡಬೇಕೆಂಬುದರ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ,” ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.
ಅವರು ಬೆಳಗಾವಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ, “ಪೂರ್ಣ ಯುದ್ಧ ನಡೆಯುತ್ತದೆ ಎಂಬ ನಿರೀಕ್ಷೆ ಜನರಲ್ಲಿ ಇದ್ದರೂ ಅದು ನಡೆಯಲಿಲ್ಲ. ಇಂದಿನಿಂದ ದೇಶವನ್ನು ಹೇಗೆ ಕಟ್ಟಬೇಕು ಎಂಬುದು ದೊಡ್ಡ ಸವಾಲಾಗಿದೆ. 1971ರಲ್ಲಿ ಇಂದಿರಾ ಗಾಂಧಿ ಪಾಕಿಸ್ತಾನವನ್ನು ಹೇಗೆ ನಿಯಂತ್ರಿಸಿದರು ಎಂಬುದನ್ನು ಬಿಜೆಪಿಯವರೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅವರೇ ಯುದ್ಧ ನಿಲ್ಲಿಸಬಾರದೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಈಗ ಯುದ್ಧ ನಿಂತಿದೆ. ನಾವು ಏನೂ ಮಾಡಲಾರದು,” ಎಂದು ಹೇಳಿದರು.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಧ್ಯಸ್ಥಿಕೆ ವಹಿಸಿದ್ದ ವಿಚಾರದ ಬಗ್ಗೆ ಮಾತನಾಡುತ್ತಾ, “ಅದು ಅಂತಾರಾಷ್ಟ್ರೀಯ ವಿಷಯ. ಟ್ರಂಪ್ ಅವರು ಯಾಕೆ ಮಧ್ಯಸ್ಥಿಕೆ ವಹಿಸಿದರು ಮತ್ತು ಅವರಿಗೆ ಮನವಿ ಮಾಡಿದವರು ಯಾರು ಎಂಬುದು ಒಂದು ದಿನ ಬಹಿರಂಗವಾಗುತ್ತದೆ. ಅವರೆಗೆ ನಾವು ಎಲ್ಲರೂ ಕಾಯಬೇಕು,” ಎಂದು ಸ್ಪಷ್ಟಪಡಿಸಿದರು.
ಸಂತಿ ಬಸ್ತವಾಡ ಗ್ರಾಮದಲ್ಲಿ ಒಂದು ಸಮುದಾಯದ ಧರ್ಮಗ್ರಂಥ ಸುಟ್ಟ ಘಟನೆಗೆ ಸಂಬಂಧಿಸಿದಂತೆ, “ಸುಮೊಟೋ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಸೀದಿಯವರು ಸಿಸಿಟಿವಿ ಸೇರಿದಂತೆ ಯಾವುದೇ ಮುನ್ನೆಚ್ಚರಿಕೆ ಕೈಗೊಂಡಿಲ್ಲ. ಇಂಥ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಅವುಗಳನ್ನು ತಡೆಯಲು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ನಗರದಲ್ಲಿ ಅಪರಾಧ ತಡೆಯಲು ಪೊಲೀಸರು ತಮ್ಮ ಶಕ್ತಿ ಪ್ರಯೋಗಿಸುತ್ತಿದ್ದಾರೆ. ಯಾವುದೇ ನಿರ್ದಿಷ್ಟ ಪ್ರಕರಣವಿದ್ದರೆ, ನಮ್ಮ ಗಮನಕ್ಕೆ ತರಬೇಕು,” ಎಂದು ಹೇಳಿದರು.