Kerala Election 2026: 10 ಹೈಪ್ರೊಫೈಲ್ ಕ್ಷೇತ್ರಗಳು ಇವು
ಕೇರಳ ವಿಧಾನಸಭಾ ಚುನಾವಣೆ 2026ರ ಕಣ ರಂಗೇರಿದೆ. ಆಡಳಿತಾರೂಢ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್ಡಿಎಫ್) ಹಾಗೂ ವಿರೋಧ ಪಕ್ಷ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ನಡುವೆ ಪ್ರಬಲ ಪೈಪೋಟಿ ಇದೆ. ಮತ್ತೊಂದೆಡೆ ಎನ್ಡಿಎ ಕೇರಳದಲ್ಲಿ ಉತ್ತಮ ಸಾಧನೆ ಮಾಡುವ ನಿರೀಕ್ಷೆಯಲ್ಲಿದೆ.
ಕೇರಳದ 140 ವಿಧಾನಸಭಾ ಕ್ಷೇತ್ರಗಳಿಗೆ ಇದೇ ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಹೊರಬೀಳಲಿದೆ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆದಿರುವ ಟಾಪ್ 10 ಹೈಪ್ರೊಫೈಲ್ ಕ್ಷೇತ್ರಗಳ ವಿವರ ಇಲ್ಲಿದೆ.
1. ಧರ್ಮಡಂ (ಕಣ್ಣೂರು)
ಸಿಪಿಐ-ಎಂ ಅಭ್ಯರ್ಥಿಯಾಗಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಧರ್ಮಡಂ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಸತತ ಮೂರನೇ ಸಲ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕಣ್ಣಿಟ್ಟಿರುವ ವಿಜಯನ್ ಅವರ ಭದ್ರಕೋಟೆ ಇದಾಗಿದೆ. ಎಲ್ಡಿಎಫ್ ಆಡಳಿತದ ಭವಿಷ್ಯ ಈ ಕ್ಷೇತ್ರದ ಫಲಿತಾಂಶದ ಮೇಲೆ ನಿಂತಿದೆ.
2. ನಾರ್ತ್ ಪರವೂರ್ (ಎರ್ನಾಕುಲಂ)
ಕಾಂಗ್ರೆಸ್ ಪಕ್ಷದಿಂದ ವಿಧಾನಸಭೆ ವಿರೋಧ ಪಕ್ಷ ನಾಯಕ ವಿ.ಡಿ. ಸತೀಶನ್ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟಕ್ಕೆ ಈ ಕ್ಷೇತ್ರ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
3. ನೇಮಂ (ತಿರುವನಂತಪುರ)
ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ಚೇಂದ್ರಶೇಖರ್ ನೇಮಂ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ನೇಮಂ ಕ್ಷೇತ್ರ ರಾಜ್ಯದಲ್ಲಿ ಬಿಜೆಪಿಯ ಪ್ರಬಲ ನೆಲೆ ಎಂದೇ ಬಿಂಬಿತವಾಗಿದೆ. 2016ರಲ್ಲಿ ಬಿಜೆಪಿಯಿಂದ ಒ.ರಾಜಗೋಪಾಲ್ ಗೆದ್ದಿದ್ದರು.
4. ಪುದುಪಳ್ಳಿ (ಕೋಟಯಂ)
ಕಾಂಗ್ರೆಸ್ನಿಂದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಪುತ್ರ ಚಾಂಡಿ ಉಮ್ಮನ್ ಸ್ಪರ್ಧಿಸುತ್ತಿದ್ದಾರೆ. ಐದು ದಶಕಗಳ ಪರಂಪರೆಯನ್ನು ಉಳಿಸುವ ಸವಾಲು ಇದೆ.
5. ವಟ್ಟಿಯೂರ್ಕಾವ್ (ತಿರುವನಂತಪುರ)
ವಟ್ಟಿಯೂರ್ಕಾವ್ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್ನ ಮಾಜಿ ಶಾಸಕ ಕೆ. ಮುರಳೀಧರನ್ ಮತ್ತು ಬಿಜೆಪಿಯ ಆರ್. ಶ್ರೀಲೇಖಾ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಶ್ರೀಲೇಖಾ ಕೇರಳದ ಮೊದಲ ಮಹಿಳಾ ಡಿಜಿಪಿ ಆಗಿದ್ದರು.
6. ಪಾಲಕ್ಕಾಡ್
ಜನಪ್ರಿಯ ಹಾಸ್ಯ ನಟ, ಕಾಂಗ್ರೆಸ್ನ ರಮೇಶ್ ಪಿಶಾರಡಿ ಮತ್ತು ಬಿಜೆಪಿಯ ಫೈರ್ಬ್ರ್ಯಾಂಡ್ ನಾಯಕಿ ಶೋಭಾ ಸುರೇಂದ್ರನ್ ಮಧ್ಯೆ ಪ್ರಬಲ ಪೈಪೋಟಿ ನಡೆಯುತ್ತಿದೆ.
7. ಹರಿಪಾಡ್ (ಆಲಪ್ಪುಳ)
ಕಾಂಗ್ರೆಸ್ನ ಹಿರಿಯ ನಾಯಕ, ವಿರೋಧ ಪಕ್ಷದ ಮಾಜಿ ನಾಯಕ ರಮೇಶ್ ಚೆನ್ನಿತ್ತಲ ಅವರು ಸ್ಪರ್ಧಿಸುತ್ತಿರುವ ಈ ಕ್ಷೇತ್ರ ಯುಡಿಆಫ್ ಪಾಲಿಗೆ ನಿರ್ಣಾಯಕವೆನಿಸಿದೆ.
8. ಕಳಕೂಟ್ಟಂ (ತಿರುವನಂತಪುರಂ)
ಬಿಜೆಪಿಯ ಮಾಜಿ ಕೇಂದ್ರ ಸಚಿವ ವಿ. ಮುರಳೀಧರನ್ ಅವರು ಅಗ್ನಿ ಪರೀಕ್ಷೆಗೆ ಇಳಿದಿದ್ದಾರೆ. ಸಿಪಿಐಎಂನ ಮಾಜಿ ಸಚಿವ ಕಡಕಂಪಳ್ಳಿ ಸುರೇಂದ್ರನ್ ಸತತ ಮೂರನೇ ಬಾರಿಗೆ ಗೆಲ್ಲುವ ಇರಾದೆಯಲ್ಲಿದ್ದಾರೆ.
9. ಮಂಜೇಶ್ವರ (ಕಾಸರಗೋಡು)
ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಮಂಜೇಶ್ವರ ಕ್ಷೇತ್ರದಲ್ಲಿ ಹಾಲಿ ಶಾಸಕ ಎ.ಕೆ.ಎಂ ಅಶ್ರಫ್ ಮತ್ತು ಎನ್ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.
10. ಕಾಸರಗೋಡು
ಯುಡಿಎಫ್ನ ಕಲ್ಲಟ್ರ ಮಾಹೀನ್ ಹಾಜಿ ಮತ್ತು ಎನ್ಡಿಎ ಅಭ್ಯರ್ಥಿ ಅಶ್ವಿನಿ ಎಂ.ಎಲ್. ನಡುವೆ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಬಾರಿ ಬಿಜೆಪಿಯ ಕೆ. ಶ್ರೀಕಾಂತ್ ಅವರನ್ನು ಮಣಿಸಿದ್ದ ಯುಡಿಎಫ್ನ ಎನ್.ಎ. ನೆಲ್ಲಿಕುನ್ನು ಗೆಲುವು ದಾಖಲಿಸಿದ್ದರು.
ಮುಖ್ಯಾಂಶಗಳು
- 140 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 9ರಂದು ಮತದಾನ
- ಮೇ 4ರಂದು ಫಲಿತಾಂಶ ಪ್ರಕಟ
- ಎಲ್ಡಿಎಫ್ ಮತ್ತು ಯುಡಿಎಫ್ ನಡುವೆ ಪ್ರಬಲ ಪೈಪೋಟಿ
- ಪಿಣರಾಯಿ ವಿಜಯನ್ ಧರ್ಮಡಂನಿಂದ ಸ್ಪರ್ಧೆ
- ಬಿಜೆಪಿ ನೇಮಂ ಮತ್ತು ಪಾಲಕ್ಕಾಡ್ನಲ್ಲಿ ಗೆಲುವಿಗೆ ಪ್ರಯತ್ನ
ಸಾಮಾನ್ಯ ಪ್ರಶ್ನೆಗಳು
ಏಪ್ರಿಲ್ 9ರಂದು ಮತದಾನ ಏಕೆ ಮುಖ್ಯವಾಗಿದೆ?
ಕೇರಳದಲ್ಲಿ ಎಲ್ಡಿಎಫ್ ಮತ್ತು ಯುಡಿಎಫ್ ನಡುವೆ ಕಟ್ಟುವಳಿಯ ಹೋರಾಟ ನಡೆಯುತ್ತಿದ್ದು, ಈ ಚುನಾವಣೆ ದಕ್ಷಿಣ ಭಾರತದ ರಾಜಕೀಯ ದಿಕ್ಕು ನಿರ್ಧರಿಸುತ್ತದೆ.
ಪಿಣರಾಯಿ ವಿಜಯನ್ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ?
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಣ್ಣೂರು ಜಿಲ್ಲೆಯ ಧರ್ಮಡಂ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.








