
Mysuru : ಮೈಸೂರಿನ ಪ್ರಸಿದ್ಧ ಅವಧೂತ ದತ್ತಪೀಠವು (Mysore Avadhoota Datta Peetha) ಭಾರತೀಯ ಸೇನೆಗೆ 25 ಲಕ್ಷ ರೂಪಾಯಿ ಹಣದ ಕಾಣಿಕೆಯನ್ನು ನೀಡಿದೆ. ಈ ದೇಣಿಗೆ, ಶ್ರೀ ದತ್ತ ವೆಂಕಟೇಶ್ವರ ಕ್ಷೇತ್ರದ 26ನೇ ಬ್ರಹ್ಮೋತ್ಸವದ ಸಂದರ್ಭದಲ್ಲಿ ನೀಡಲಾಯಿತು. ಈ ಉತ್ಸವ ಭಾನುವಾರ ಸಂಜೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮತ್ತು ಅವರ ಶಿಷ್ಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ವೇದ ಪಾರಾಯಣಗಳೊಂದಿಗೆ ಆರಂಭವಾಯಿತು.
ಈ ಸಂದರ್ಭದಲ್ಲಿ ಮೈಸೂರು-ಕೊಡಗು ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ದತ್ತಪೀಠದ ವತಿಯಿಂದ ನೀಡಲಾದ 25 ಲಕ್ಷ ರೂ.ಗಳ ಚೆಕ್ ಅನ್ನು ಸೇನೆಗೆ ಹಸ್ತಾಂತರಿಸಿದರು.
ಚೆಕ್ ಸ್ವೀಕರಿಸಿ ಮಾತನಾಡಿದ ಸಂಸದ ಯದುವೀರ್, ಮೈಸೂರು ತನ್ನ ಸಂಸ್ಕೃತಿ, ಪರಂಪರೆ ಹಾಗೂ ಗುರು ಪರಂಪರೆಯ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ಹೇಳಿದ್ದಾರೆ. ದತ್ತಪೀಠವು ಈ ಪರಂಪರೆಯನ್ನು ಉಳಿಸಿಕೊಂಡು ಬರುತ್ತಿದ್ದು, ಇಲ್ಲಿನ ಶಾಂತ ವಾತಾವರಣ ಹಾಗೂ ಸಂಗೀತವೂ ವಿಶೇಷವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ, ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 83ನೇ ಜನ್ಮದಿನೋತ್ಸವವೂ ಹಮ್ಮಿಕೊಳ್ಳಲಾಗಿದ್ದು, ಅವರಿಗೆ ಆರೋಗ್ಯ, ಐಶ್ವರ್ಯ ಮತ್ತು ಆಯುಷ್ಯ ಪ್ರಾಪ್ತಿ ಆಗಲೆಂದು ಶುಭಾಶಯಗಳನ್ನು ಅರ್ಪಿಸಿದರು. “ಈ ಕಾಣಿಕೆಯನ್ನು ನಾನು ಭಾರತ ಸರ್ಕಾರದವರೆಗೆ ತಲುಪಿಸುತ್ತೇನೆ. ಶ್ರೀಗಳ ಆಶೀರ್ವಾದ ದೇಶದ ಜನತೆ ಮತ್ತು ಸೈನಿಕರ ಮೇಲೆ ಸದಾ ಇರಲಿ ಎಂದು ನಾನು ಪ್ರಾರ್ಥಿಸುತ್ತೇನೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್, ಶಾಸಕ ಟಿ ಎಸ್ ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ ಮತ್ತಿತರರು ಉಪಸ್ಥಿತರಿದ್ದರು.