Bengaluru: ವಾಹನ ತಪಾಸಣೆ ವೇಳೆ ಪೊಲೀಸರು ಮತ್ತು ವಾಹನ ಸವಾರರ ನಡುವೆ ಉಂಟಾಗುವ ಗಲಾಟೆಗಳನ್ನು ತಡೆಯಲು, ರಾಜ್ಯದ ನಗರ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಹೊಸ ತಂತ್ರಜ್ಞಾನಾದಾರಿತ ವ್ಯವಸ್ಥೆಯಾದ ITMS (ntelligent Traffic Management System) ಜಾರಿಗೆ ತರಲಾಗುತ್ತಿದೆ.
ಇತ್ತೀಚೆಗೆ ಮಂಡ್ಯದಲ್ಲಿ ತಪಾಸಣೆ ವೇಳೆ ಸಂಭವಿಸಿದ ದುರ್ಘಟನೆ—ಮಗು ಸಾವಿಗೀಡಾದ ಪ್ರಕರಣದ ನಂತರ, ಇಂತಹ ಘಟನೆಗಳು ಪುನರಾವೃತವಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಶಾರೀರಿಕ ತಪಾಸಣೆ ಬದಲಿಗೆ ಕ್ಯಾಮರಾ ನಿಗಾವೇ ಪ್ರಮುಖ ಪಾತ್ರವಹಿಸುತ್ತದೆ.
ITMS ಏನು ಮಾಡುತ್ತದೆ?
- ನಗರ-ಪಟ್ಟಣಗಳ ಮುಖ್ಯ ರಸ್ತೆ ಸಂಧಿಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ.
- ಕೃತಕ ಬುದ್ಧಿಮತ್ತೆ (AI) ಯಂತ್ರಗಳು ಚಾಲಕರ ತಪ್ಪುಗಳನ್ನು ಪತ್ತೆಹಚ್ಚುತ್ತವೆ.
- ಎಎನ್ಪಿಆರ್ (ಅಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್) ಕ್ಯಾಮರಾ ನಂಬರ್ ಪ್ಲೇಟ್ ಓದಿ, ನಿಯಮ ಉಲ್ಲಂಘನೆ ಪತ್ತೆಹಚ್ಚುತ್ತದೆ.
- ತಪ್ಪು ಮಾಡಿದ ವಾಹನದ ಫೋಟೋಗಳು ಹಾಗೂ ಮಾಹಿತಿ ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್ಗೆ ಹೋಗುತ್ತವೆ.
- ದಂಡ ಬಾಕಿ ಇರುವ ವಾಹನಗಳು ಕಂಡುಬಂದರೆ, ಹತ್ತಿರದ ಪೊಲೀಸರಿಗೆ ಮಾಹಿತಿ ಕಳಿಸಿ ತಕ್ಷಣ ದಂಡ ವಸೂಲಿ ಮಾಡಲಾಗುತ್ತದೆ.
ಹೆಲ್ಮೆಟ್ ಧರಿಸದಿರುವುದು, ವೇಗ ಮಿತಿ ಮೀರುವುದು, ಸಿಗ್ನಲ್ ಜಂಪ್, ಚಾಲನೆ ವೇಳೆ ಮೊಬೈಲ್ ಬಳಸುವುದು, ಸೀಟ್ ಬೆಲ್ಟ್ ಇಲ್ಲದೆ ಚಾಲನೆ ಮಾಡುವುದು ಮೊದಲಾದ ಎಲ್ಲ ತಪ್ಪುಗಳಿಗೂ ITMS ನಿಗಾ ಇರುತ್ತದೆ.
ಪ್ರತಿಯೊಂದು ಉಲ್ಲಂಘನೆಯಲ್ಲೂ ನೋಟಿಸ್ ಸಿಗುತ್ತದೆ ಮತ್ತು ಸವಾರರ ಮೊಬೈಲ್ಗೆ ಸಂದೇಶ ಕೂಡ ಬರುತ್ತದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಹೇಳಿದ್ದು ಹೀಗಿದೆ, “ಈ ಹೊಸ ವ್ಯವಸ್ಥೆ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಉಂಟಾಗುವ ಸಮಸ್ಯೆಗಳನ್ನು ತಡೆಯಲಿದ್ದು, ಸುಗಮ ಸಂಚಾರ ನಿರ್ವಹಣೆಗೆ ಸಹಾಯವಾಗಲಿದೆ.”