
Bengaluru: “ಸರ್ಕಾರಕ್ಕೆ ದುಡ್ಡಿಲ್ಲ ಅನ್ನೋದು ನಾನಿಲ್ಲ ಹೇಳಿಲ್ಲ, ತಮಾಷೆಗೆ ಹೇಳಿದ್ದೆ” ಎಂದು ಗೃಹ ಸಚಿವ ಜಿ. ಪರಮೇಶ್ವರ (Home Minister G. Parameshwara) ಸ್ಪಷ್ಟಪಡಿಸಿದ್ದಾರೆ. ಅವರ ಆಡಿಯೋ ವೈರಲ್ ಆದ ಹಿನ್ನೆಲೆಯಲ್ಲಿದು.
ಸದಾಶಿವನಗರದಲ್ಲಿ ಮಾತನಾಡಿದ ಅವರು, “ಮುಖ್ಯಮಂತ್ರಿ 4.9 ಲಕ್ಷ ಕೋಟಿ ಬಜೆಟ್ ಮಾಡಿದ್ದಾರಲ್ಲ, ಅಂದಮೇಲೆ ಸರ್ಕಾರಕ್ಕೆ ಹಣವಿಲ್ಲ ಅನ್ನೋದು ನಿಜ ಅಲ್ಲ. ನಾನು ತಮಾಷೆಯಾಗಿ ಮಾತಾಡಿದ್ದೆ. ಹಣ ಬಿಡುಗಡೆ ಸ್ವಲ್ಪ ತಡವಾಗಬಹುದು, ಯೋಜನೆಯ ಡಿಪಿಆರ್ ತಡವಾಗಿ ಬರುತ್ತಿರಬಹುದು ಅಷ್ಟೆ” ಎಂದು ಹೇಳಿದರು.
“ಅವರು ಹೈವೇನಲ್ಲಿ ಬಂದಾಗ ಘಟನೆ ನಡೆದಂತೆ ಮಾಹಿತಿ ಬಂದಿದೆ. ಡ್ರೈವರ್ ಮತ್ತು ಗನ್ ಮ್ಯಾನ್ ಕಾರು ನಿಲ್ಲಿಸಿ ಹೊಡೆದಂತೆ ಹೇಳಲಾಗಿದೆ. ಆದರೆ ಗನ್ ಮ್ಯಾನ್ ಹೊಡೆದಿಲ್ಲ ಅಂತಾ ಹೇಳುತ್ತಿದ್ದಾರೆ. ಇನ್ನೂ ತನಿಖೆ ನಡೆಯಬೇಕು. ನಿಜಾಸತ್ಯಕ್ಕೆ ಬರಲು ಇನ್ನಷ್ಟು ದಿನ ಬೇಕು,” ಎಂದರು.
ಅನಂತ್ ಕುಮಾರ್ ಹೆಗಡೆ ಪ್ರಕರಣ ಕುರಿತು, “ಇಂತಹ ಘಟನೆಗಳನ್ನು ನಾವು ಸರಳವಾಗಿ ತೆಗೆದುಕೊಳ್ಳಲ್ಲ. ಕೇಸ್ ಹಾಕಿ ಕೂಡಲೇ ಬಂಧಿಸುತ್ತೇವೆ. ಇವು ಸಮಾಜಕ್ಕೆ ಹಾನಿ ಮಾಡಬಲ್ಲದು, ಹಾಗಾಗಿ ಗಂಭೀರವಾಗಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ” ಎಂದರು.
ಕಾಲ್ತುಳಿತ ಪ್ರಕರಣ ವರದಿ ಕುರಿತು, “ಪೊಲೀಸರ ವೈಫಲ್ಯವನ್ನ ಉಲ್ಲೇಖಿಸಿರುವ ವರದಿಯನ್ನು ನಾನು ಇನ್ನೂ ನೋಡಿಲ್ಲ. ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಪೂರ್ತಿ ಓದಿ ನೋಡಿ ಅರ್ಥಮಾಡಿಕೊಳ್ಳಬೇಕು” ಎಂದು ಸ್ಪಷ್ಟಪಡಿಸಿದರು.
ಕೈ ಶಾಸಕರ ಅಸಮಾಧಾನ ಕುರಿತು, “ಕೆಲವರು ತಮ್ಮ ಕ್ಷೇತ್ರಕ್ಕೆ ಅನುದಾನ ಬಂದಿಲ್ಲ ಅಂತಾ ಹೇಳಿದ್ದಾರೆ. ಆ ಬಗ್ಗೆ ನಾನು ಗಮನಿಸಿದ್ದೇನೆ. ಅನುದಾನ ಇಲ್ಲದಿದ್ದರೆ ಬೇಸರ ಆಗುವುದು ಸಹಜ. ಸಿಎಂ ಈ ಬಗ್ಗೆ ಗಮನ ಹರಿಸುತ್ತಾರೆ” ಎಂದರು.