ಭಾರತ ಸರ್ಕಾರ ಏಪ್ರಿಲ್ 27ರಿಂದ ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾದ ಎಲ್ಲಾ ವೀಸಾಗಳನ್ನು (Pakistani visas) ರದ್ದುಗೊಳಿಸಿದೆ. ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ದಾಳಿಯಲ್ಲಿ 26 ಜನ ಪ್ರವಾಸಿಗರು ಸಾವನ್ನಪ್ಪಿದ್ದರು.
ಇದರ ಬೆನ್ನಲ್ಲೇ ಗೃಹ ಸಚಿವ ಅಮಿತ್ ಶಾ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ತಮ್ಮ ರಾಜ್ಯಗಳಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿ ಅವರನ್ನು ತವರಿಗೆ ಕಳುಹಿಸುವಂತೆ ಸೂಚನೆ ನೀಡಿದರು. ಈ ಬಗ್ಗೆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಯಿತು.
ವಿದೇಶಾಂಗ ಸಚಿವಾಲಯ ತಿಳಿಸಿದಂತೆ, ಹಿಂದೂ ಪಾಕಿಸ್ತಾನಿ ಪ್ರಜೆಗಳಿಗೆ ನೀಡಿರುವ ದೀರ್ಘಾವಧಿಯ ವೀಸಾಗಳು ಮಾನ್ಯವಾಗಿಯೇ ಇರುತ್ತವೆ. ಆದರೆ ಪಾಕಿಸ್ತಾನಿ ವೈದ್ಯಕೀಯ ವೀಸಾಗಳು ಏಪ್ರಿಲ್ 29ರವರೆಗೆ ಮಾತ್ರ ಮಾನ್ಯವಾಗಿರುತ್ತವೆ. ಭಾರತದಲ್ಲಿರುವ ಎಲ್ಲ ಪಾಕ್ ನಾಗರಿಕರು ತಮ್ಮ ವೀಸಾ ಅವಧಿ ಮುಗಿದ ಮೇಲೆ ದೇಶ ಬಿಟ್ಟು ಹೊರಡಬೇಕು ಎಂಬುದಾಗಿ ಸೂಚಿಸಲಾಗಿದೆ.
ಪಾಕ್ ವಿರುದ್ಧದ ಕ್ರಮಗಳ ಭಾಗವಾಗಿ, ಭಾರತ ಪಾಕಿಸ್ತಾನದ ಮಿಲಿಟರಿ ಅಟ್ಯಾಚ್ ಗಳನ್ನು ಹೊರಹಾಕುವುದು, ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದು ಹಾಗೂ ಅಟ್ಟಾರಿ ಭೂ ಸಾರಿಗೆ ಗಡಿಯನ್ನು ಮುಚ್ಚುವ ನಿರ್ಧಾರ ತೆಗೆದುಕೊಂಡಿದೆ.