Gadag: ಗದಗ ತಾಲೂಕಿನಲ್ಲಿ ಕಳಪೆ ಗುಣಮಟ್ಟದ (poor quality maize) ಜೋಳವನ್ನು ಪಡಿತರದಲ್ಲಿ ವಿತರಿಸಲಾಗುತ್ತಿದೆ, ಪಡಿತರ ಅಂಗಡಿ ಮಾಲೀಕರು ದೂಳು, ಕಸ, ಜಿಡ್ಡು ಹಿಡಿದ ಜೋಳ ವಿತರಣೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಈ ಬಗ್ಗೆ ನ್ಯಾಯಬೆಲೆ ಅಂಗಡಿ ಅವರನ್ನು ಪ್ರಶ್ನಿಸಿದಾಗ, ಸರ್ಕಾರ ಏನು ಕೊಟ್ಟಿದೆಯೋ ಅದನ್ನು ನಾವು ಕೊಡುತ್ತೇವೆ ಅಷ್ಟೆ ಎಂದಿದ್ದಾರೆ. ಮತ್ತೊಂದೆಡೆ, ಸರ್ಕಾರ ನೀಡಿದ ಜೋಳದ ರೊಟ್ಟಿ ತಿಂದರೆ ಆಸ್ಪತ್ರೆ ಸೇರುವುದು ಗ್ಯಾರಂಟಿ ಅಂತ ಸರ್ಕಾರದ ವಿರುದ್ಧ ಬಡ ಮಹಿಳೆಯರು ಕಿಡಿಕಾರಿದ್ದಾರೆ.
ಪಡಿತರ ಧಾನ್ಯ ಇಲ್ಲದೇ ಬದುಕು ಇಲ್ಲ. ಬಡವರು ಹೇಗಾದರೂ ಖರೀದಿ ಮಾಡಲೇಬೇಕು. ಆದರೆ, ಸರ್ಕಾರ ಉಚಿತ ನೀಡುವ ಪಡಿತರ ಜೋಳವನ್ನು ಕಳಪೆ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರಕ್ಕೆ ಬಡವರ ಬಗ್ಗೆ ಇರುವ ಕಾಳಜಿ ಇದುವೆಯಾ ಎಂದು ಸರ್ಕಾರಕ್ಕೆ ಮಹಿಳೆಯರು ಖಡಕ್ ಪ್ರಶ್ನೆ ಮಾಡಿದ್ದಾರೆ.
ಇನ್ನಾದರೂ ಆಹಾರ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಜಿಲ್ಲೆಯಲ್ಲಿ ಎಷ್ಟು ಪ್ರಮಾಣದಲ್ಲಿ ಕಳಪೆ ಜೋಳ ವಿತರಣೆ ಆಗಿದೆಯೋ ಅವೆಲ್ಲವನ್ನು ವಾಪಸ್ ಪಡೆದು ಗುಣಮಟ್ಟದ ಜೋಳ ವಿತರಣೆ ಮಾಡಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.